ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಬಜೆಟ್ ಅನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದರು. ಇದು ಅವರು ಮಂಡಿಸುತ್ತಿರುವ ದಾಖಲೆಯ 17ನೇ ಆಯವ್ಯಯವಾಗಿದ್ದು, ಈ ಬಾರಿಯ ಒಟ್ಟು ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂ.ಗಳಾಗಿದೆ. ಕೃಷಿ, ಉದ್ಯೋಗ, ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಭರ್ಜರಿ ಕೊಡುಗೆ ನೀಡಿರುವ ಈ ಬಜೆಟ್ನಲ್ಲಿ, ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ (Social Media) ಬಳಸುವಂತಿಲ್ಲ ಎಂಬ ಅತ್ಯಂತ ಮಹತ್ವದ ಹಾಗೂ ದಿಟ್ಟ ಘೋಷಣೆಯನ್ನು ಸಿಎಂ ಮಾಡಿದ್ದಾರೆ.
ರಾಜ್ಯ ಸರ್ಕಾರ ಮಂಡಿಸಿರುವ ನೂತನ ಬಜೆಟ್ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಭರ್ಜರಿ ಕೊಡುಗೆಗಳನ್ನು ಘೋಷಿಸಲಾಗಿದೆ. ಶಿಕ್ಷಣಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗಿದ್ದು, ವಸತಿ ಶಾಲೆಗಳ ಉನ್ನತೀಕರಣ, ಲ್ಯಾಪ್ಟಾಪ್ ವಿತರಣೆ, ಉದ್ಯೋಗಕ್ಕೆ ಪ್ರೋತ್ಸಾಹ, ಹಾಗೂ ಮಹಿಳಾ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಹಲವು ಹೊಸ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಬಜೆಟ್ನಲ್ಲಿ ಘೋಷಣೆಯಾಗಿರುವ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:
ಶಿಕ್ಷಣಕ್ಕೆ ಸಿಂಹಪಾಲು: ಹೊಸ ವಸತಿ ಶಾಲೆಗಳು ಹಾಗೂ ಉನ್ನತೀಕರಣ
ಸಂತ ಶಿಶುನಾಳ ಶರೀಫರ ವಸತಿ ಶಾಲೆ: ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ 10 ಹೊಸ ‘ಸಂತ ಶಿಶುನಾಳ ಶರೀಫರ ವಸತಿ ಶಾಲೆ’ಗಳನ್ನು CBSE ಪಠ್ಯಕ್ರಮದಡಿ ಆರಂಭಿಸಲಾಗುವುದು. 2026-27ನೇ ಸಾಲಿನಲ್ಲಿ ಈ ಮಾದರಿಯ ಇನ್ನೂ 25 ಹೊಸ ಶಾಲೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ.
ಮೌಲಾನಾ ಆಜಾದ್ ಶಾಲೆಗಳ ಮೇಲ್ದರ್ಜೆ: ಕಳೆದ ವರ್ಷದ ಯೋಜನೆಯ ಮುಂದುವರಿದ ಭಾಗವಾಗಿ, ಈ ವರ್ಷ 400 ಕೋಟಿ ರೂ. ವೆಚ್ಚದಲ್ಲಿ 100 ಮೌಲಾನಾ ಆಜಾದ್ ಮತ್ತು ಉರ್ದು ಶಾಲೆಗಳನ್ನು ಕೆ.ಪಿ.ಎಸ್ (KPS) ಮಾದರಿಗೆ ಉನ್ನತೀಕರಿಸಲಾಗುವುದು.
ಹೊಸ ವಿಭಾಗಗಳ ಆರಂಭ: ಪ್ರಸ್ತುತವಿರುವ 25 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಹಾಗೂ 18 ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗವನ್ನು ಹೊಸದಾಗಿ ಆರಂಭಿಸಲಾಗುವುದು.
ವಕ್ಫ್ ಶಿಕ್ಷಣ ಸಂಸ್ಥೆಗಳಿಗೆ ಬಲ: ವಕ್ಫ್ ಸಂಸ್ಥೆಗಳ ಅಡಿಯಲ್ಲಿರುವ 31 ಮಹಿಳಾ ಪದವಿಪೂರ್ವ (PUC) ಕಾಲೇಜುಗಳನ್ನು ಪದವಿ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಸವಣೂರಿನಲ್ಲಿ ಹೊಸ ಮಹಿಳಾ ಪಿಯು ಕಾಲೇಜು ಆರಂಭವಾಗಲಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ ಲ್ಯಾಪ್ಟಾಪ್ ವಿತರಣೆ
ಉಚಿತ ಲ್ಯಾಪ್ಟಾಪ್: ತಾಂತ್ರಿಕ ಮತ್ತು ಡಿಜಿಟಲ್ ಶಿಕ್ಷಣವನ್ನು ಪ್ರೋತ್ಸಾಹಿಸಲು 5,000 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 50,000 ರೂ. ಮೌಲ್ಯದ ಲ್ಯಾಪ್ಟಾಪ್ ಖರೀದಿಸಲು ನೆರವು ನೀಡಲಾಗುವುದು.
ಸೆಂಟರ್ ಆಫ್ ಎಕ್ಸಲೆನ್ಸ್: K-CET/JEE/NEET ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಲು ಪ್ರವೇಶ ಪರೀಕ್ಷೆ ಮೂಲಕ ಪ್ರತಿಭಾವಂತರನ್ನು ಆಯ್ಕೆ ಮಾಡಿ, 4 ವಸತಿ ಶಾಲೆಗಳನ್ನು ‘Center of Excellence’ ಆಗಿ ಪರಿವರ್ತಿಸಲಾಗುವುದು. ಹೆಚ್ಚುವರಿಯಾಗಿ 20 ವಸತಿ ಶಾಲೆಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು.
ಉದ್ಯೋಗಶೀಲತೆ ಮತ್ತು ಮಹಿಳಾ ಸಬಲೀಕರಣ
ಫುಡ್ ಟ್ರಕ್/ಮೊಬೈಲ್ ಕ್ಯಾಂಟೀನ್: ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯಮಶೀಲತಾ ಯೋಜನೆಯಡಿ ‘ಫಾಸ್ಟ್ ಫುಡ್ ಟ್ರಕ್/ಮೊಬೈಲ್ ಕಿಯೋಸ್ಕ್’ ಸ್ಥಾಪಿಸಲು ಘಟಕ ವೆಚ್ಚದ ಶೇ. 75 ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ.ಗಳ ಸಹಾಯಧನ ಒದಗಿಸಲಾಗುವುದು.
ಮಹಿಳಾ ವಸತಿ ನಿಲಯ: ಬೆಂಗಳೂರಿನಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ತಲಾ 100ರ ಸಂಖ್ಯಾಬಲದ 4 ಹೊಸ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು.
ಸ್ವ-ಸಹಾಯ ಗುಂಪುಗಳಿಗೆ ನೆರವು: ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡಲು ಅಲ್ಪಸಂಖ್ಯಾತರ ಮಹಿಳಾ ಕೋ-ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸಲಾಗುವುದು.
ಹಿರಿಯ ನಾಗರಿಕರ ಆರೈಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ
ವೃದ್ಧಾಶ್ರಮಗಳಿಗೆ ನೆರವು: ಕ್ರೈಸ್ತ ಸಂಸ್ಥೆಗಳು ನಡೆಸುವ 10 ವೃದ್ಧಾಶ್ರಮಗಳಲ್ಲಿ ಜೆರಿಯಾಟ್ರಿಕ್ ಪ್ಯಾಲಿಯೇಟಿವ್ ಕೇರ್ (Geriatric Palliative Care) ಘಟಕ ಸ್ಥಾಪಿಸಲು 5 ಕೋಟಿ ರೂ. (ತಲಾ 50 ಲಕ್ಷ) ಅನುದಾನ. ನಿರ್ಗತಿಕರಿಗಾಗಿ 100 ಸಂಖ್ಯಾಬಲದ 2 ಮಹಿಳಾ ವೃದ್ಧಾಶ್ರಮಗಳಿಗೆ ನೆರವು.
ತರಬೇತಿ ಕೇಂದ್ರ: ಬೆಂಗಳೂರಿನ ಕೆಂಗೇರಿಯ ಆಸಿರ್ವನಂ ಬೆನಿಡಿಕ್ಟಿನ್ ಮೊನಾಸ್ಟರಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ. ಅನುದಾನ.
ಹಜ್ ಭವನ: ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಯಾತ್ರಿಕರಿಗಾಗಿ ನೂತನ ಹಜ್ ಭವನಗಳ ನಿರ್ಮಾಣ.
ವಕ್ಫ್ ಆಸ್ತಿ ಅಭಿವೃದ್ಧಿ: ವಾಣಿಜ್ಯ ಬೇಡಿಕೆಯಿರುವ ವಕ್ಫ್ ಆಸ್ತಿಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (PPP) ಅಭಿವೃದ್ಧಿಪಡಿಸುವುದು ಹಾಗೂ ಆಯ್ದ ಆಸ್ತಿಗಳಲ್ಲಿ ಕಲಿಕಾ ಕೇಂದ್ರ ಮತ್ತು ನಾಗರಿಕ ಸೇವಾ ಕೇಂದ್ರಗಳ ಆರಂಭ.
ಬೌದ್ಧ, ಜೈನ, ಸಿಖ್ ಸಮುದಾಯಗಳ ಅಭಿವೃದ್ಧಿ
ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲು.
ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ ಮಾಸಿಕ 6,000 ರೂ.ಗಳ ಗೌರವಧನ.
ಬೀದರ್ನ ಐತಿಹಾಸಿಕ ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದಲ್ಲಿ ಹೊಸ ಗ್ರಂಥಾಲಯ ಸ್ಥಾಪನೆ.
ಇದಲ್ಲದೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಪ್ರಮುಖ ಸಮಾಜ ಸುಧಾರಕರ ಪುಸ್ತಕಗಳನ್ನು ಉರ್ದು ಭಾಷೆಗೆ ಅನುವಾದಿಸುವ ಮಹತ್ವದ ನಿರ್ಧಾರವನ್ನು ಸಹ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಒಟ್ಟಾರೆಯಾಗಿ ಈ ಬಾರಿಯ ಬಜೆಟ್ ಅಲ್ಪಸಂಖ್ಯಾತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನನ್ನುಡಿ ಬರೆದಿದೆ.






