ದಾವಣಗೆರೆ : ಗ್ರಾಮ ದೇವತೆಯ ಜಾತ್ರೆಯ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಜಾತ್ರೆಯ ಆಚರಣೆ ಮಾಡುತ್ತಿದ್ದಾಗ ಗಂಡನೊಬ್ಬ ಕಂಠಪೂರ್ತಿ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಹೆಂಡತಿಯ ತಲೆ ಹಾಗೂ ಕಿವಿಯ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದು, ಕಿವಿಯಲ್ಲಿ ರಸ್ತಸ್ರಾವ ಉಂಟಾಗಿ ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲ್ಲೂಕಿನ ಶಿರಮಗೊಂಡನಹಳ್ಳಿಯಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಬೇಡಿ ಎಂದು ಹಿರಿಯರು ಹೇಳುತ್ತಾರೆ. ಆದರೆ, ಇಲ್ಲೊಬ್ಬ ಕುಡುಕ ಗಂಡ ತನ್ನ ಗ್ರಾಮದೇವತೆಯ ಜಾತ್ರೆಯ ವೇಳೆಮದ್ಯವ್ಯಸನಿ ಗಂಡ ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿದ್ದ ಹೆಂಡ್ತಿಯನ್ನು ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಅರ್ಪಿತಾ (24) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾಳೆ. ಹನಮಂತ (28) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ಕಳೆದ ಐದು ವರ್ಷಗಳ ಬಳಿಕ ಬಂದ ಗ್ರಾಮದೇವತೆ ಹಬ್ಬಕ್ಕೆ ಎಲ್ಲ ಮನೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಎಲ್ಲ ಮನೆಗಳಲ್ಲಿಯೂ ಮಾಂಸಾಹಾರದ ಊಟವನ್ನೂ ಮಾಡಲಾಗಿರುತ್ತದೆ. ಜಾತ್ರೆ ಹಿನ್ನೆಲೆ ಕಂಠಪೂರ್ತಿ ಮದ್ಯಪಾನ ಮಾಡಿದ್ದ ಹನುಮಂತ, ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಆದರೆ, ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಹಲ್ಲೆ ಮಾಡಿದ್ದು, ಈಗ ಪತ್ನಿ ಸಾವನ್ನಪ್ಪಿದ್ದಾಳೆ.
ಕಳೆದೆರಡು ವರ್ಷದ ಹಿಂದೆ ಹನುಮಂತ ಮತ್ತು ಅರ್ಪಿತಾ ಮದುವೆಯಾಗಿತ್ತು. ಆರೋಪಿ ಹನುಮಂತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.