ಚನ್ನೈ : ತಮಿಳುನಾಡಿನಲ್ಲಿ ಟಿಬಿಕೆ ಪಕ್ಷ ಸರ್ಕಾರ ರಚನೆ ಮಾಡಲು ತೀವ್ರ ಕಸರತ್ತು ನಡೆಸುತ್ತಿದ್ದು ನಿನ್ನೆ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಮುಸ್ಲಿಂ ಲೀಗ್ ಪಕ್ಷಗಳು ಇಂದು ಏಕಾಏಕಿ ಉಲ್ಟಾ ಪಡೆದಿದೆ ಪಕ್ಷಗಳ ಡಿಮ್ಯಾಂಡ್ಗಳನ್ನು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ ಅವರು ಒಪ್ಪಿಕೊಂಡಿದ್ದು ಬಹುತೇಕ ತಮಿಳುನಾಡಿನಲ್ಲಿ ಸರ್ಕಾರ ರಚನೆ ಫಿಕ್ಸ್ ಎಂದು ಹೇಳಲಾಗುತ್ತಿದೆ.
ಇದರ ಮಧ್ಯ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ತಿರುಗು ಸಿಕ್ಕಿದ್ದು ಅಣ್ಣ ಡಿಎಂಕೆ ಮತ್ತು ಡಿಎಂಕೆ ನಡುವೆ ಮಾತುಕತೆ ಮುಂದುವರೆದಿದೆ. ವಿಸಿಕೆ ಮುಖ್ಯಸ್ಥನಿಗೆ ಸಿಎಂ ಹುದ್ದೆ ಆಫರ್ ನೀಡಲು AIADMK ರಣತಂತ್ರ ರೂಪಿಸಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಬರುತ್ತಿದೆ. ಹಾಗಾಗಿ ಇದೀಗ ತಮಿಳುನಾಡಿನಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎನ್ನುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
ಟಿವಿಕೆ ಸರ್ಕಾರ ರಚನೆಗೆ ಮುಸ್ಲಿಂ ಲೀಗ್ ಅಡ್ಡಗಾಲು?
ಪಕ್ಷ ಸ್ಥಾಪಿಸಿದ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಗೆದ್ದು ದಾಖಲೆ ಬರೆದಿರುವ ವಿಜಯ್ ಅವರಿಗೆ ಸರ್ಕಾರ ರಚಿಸಲು ಇನ್ನು ಕೆಲವೇ ಶಾಸಕರ ಬೆಂಬಲದ ಅಗತ್ಯವಿದೆ. ನಿನ್ನೆ ಮುಸ್ಲಿಂ ಲೀಗ್ (IUML) ಪಕ್ಷದ ನಾಯಕರು ವಿಜಯ್ ಅವರಿಗೆ ಬೆಂಬಲ ನೀಡುವ ಸೂಚನೆ ನೀಡಿದ್ದರು. ಆದರೆ ಇಂದು ದಿಢೀರ್ ಯು-ಟರ್ನ್ ಹೊಡೆದಿರುವ ಮುಸ್ಲಿಂ ಲೀಗ್, ತಾವು ಡಿಎಂಕೆ ಮೈತ್ರಿಯಲ್ಲೇ ಮುಂದುವರಿಯುವುದಾಗಿ ಘೋಷಿಸಿದೆ. ಮುಸ್ಲಿಂ ಲೀಗ್ನ ಈ ನಿರ್ಧಾರ ಟಿವಿಕೆಗೆ ಸ್ವಲ್ಪ ಹಿನ್ನಡೆ ತಂದಿದ್ದರೂ, ವಿಜಯ್ ಅವರು ಬೇರೆ ಸಣ್ಣ ಪಕ್ಷಗಳ ಡಿಮ್ಯಾಂಡ್ಗಳನ್ನು ಒಪ್ಪಿಕೊಳ್ಳುವ ಮೂಲಕ ಮ್ಯಾಜಿಕ್ ಸಂಖ್ಯೆ ಸರಿದೂಗಿಸಲು ಮುಂದಾಗಿದ್ದಾರೆ.
ಅಣ್ಣಾ ಡಿಎಂಕೆ ಮತ್ತು ಡಿಎಂಕೆ ಕೈಜೋಡಿಸುವ ಸಾಧ್ಯತೆ?
ರಾಜ್ಯ ರಾಜಕೀಯದ ಇತಿಹಾಸದಲ್ಲೇ ಕಾಣದ ಅಪರೂಪದ ಬೆಳವಣಿಗೆಯಾಗಿ, ಬದ್ಧ ವೈರಿಗಳಾದ ಡಿಎಂಕೆ ಮತ್ತು ಅಣ್ಣಾ ಡಿಎಂಕೆ (AIADMK) ನಡುವೆ ಟಿವಿಕೆಯನ್ನು ಅಧಿಕಾರದಿಂದ ದೂರ ಇಡಲು ಒಳಗೊಳಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ವಿಜಯ್ ಅವರ ಜನಪ್ರಿಯತೆ ಮತ್ತು ವೇಗವಾಗಿ ಬೆಳೆಯುತ್ತಿರುವ ಶಕ್ತಿಯನ್ನು ತಡೆಯಲು ಈ ಎರಡು ದ್ರಾವಿಡ ಪಕ್ಷಗಳು ಒಂದಾಗುವ ಅಥವಾ ಪರೋಕ್ಷವಾಗಿ ಸಹಕರಿಸುವ ರಣತಂತ್ರ ರೂಪಿಸುತ್ತಿವೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಅವರಿಗೆ ‘ಸಿಎಂ’ ಹುದ್ದೆ ಆಫರ್?
ಈ ಎಲ್ಲ ನಾಟಕೀಯ ಬೆಳವಣಿಗೆಗಳ ನಡುವೆ ಅಣ್ಣಾ ಡಿಎಂಕೆ ಪಕ್ಷವು ಒಂದು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ ಎನ್ನಲಾಗುತ್ತಿದೆ. ವಿಜಯ್ ಅವರಿಗೆ ಬೆಂಬಲ ನೀಡಲು ಸಜ್ಜಾಗುತ್ತಿರುವ ವಿಸಿಕೆ (VCK) ಪಕ್ಷವನ್ನು ತನ್ನತ್ತ ಸೆಳೆಯಲು, ವಿಸಿಕೆ ಮುಖ್ಯಸ್ಥ ತೊಲ್ ತಿರುಮಾವಳವನ್ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಆಫರ್ ಮಾಡಲಾಗಿದೆ ಎಂಬ ಗಂಭೀರ ಚರ್ಚೆಗಳು ನಡೆಯುತ್ತಿವೆ. ಈ ಮೂಲಕ ದಲಿತ ಮತಬ್ಯಾಂಕ್ ಮತ್ತು ಸಣ್ಣ ಪಕ್ಷಗಳನ್ನು ಒಗ್ಗೂಡಿಸಿ ಟಿವಿಕೆಯನ್ನು ಏಕಾಂಗಿಯಾಗಿಸುವುದು ಅಣ್ಣಾ ಡಿಎಂಕೆಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಕುತೂಹಲದ ಘಟ್ಟದಲ್ಲಿ ತಮಿಳುನಾಡು ರಾಜಕೀಯ
ಪ್ರಸ್ತುತ ಸನ್ನಿವೇಶದಲ್ಲಿ ತಮಿಳುನಾಡು ರಾಜಕೀಯ ಚದುರಂಗದಾಟದಂತಾಗಿದೆ. ಒಂದೆಡೆ ಜನರ ಬೆಂಬಲ ಮತ್ತು ಅತಿದೊಡ್ಡ ಪಕ್ಷವಾಗಿರುವ ಟಿವಿಕೆ ಅಧಿಕಾರ ಹಿಡಿಯಲು ಹವಣಿಸುತ್ತಿದ್ದರೆ, ಮತ್ತೊಂದೆಡೆ ದಶಕಗಳ ಕಾಲ ಆಳ್ವಿಕೆ ನಡೆಸಿದ ದ್ರಾವಿಡ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮೈತ್ರಿ ಮತ್ತು ಆಫರ್ಗಳ ಮೊರೆ ಹೋಗಿವೆ. ರಾಜ್ಯಪಾಲರ ನಡೆ ಮತ್ತು ಮುಂದಿನ 24 ಗಂಟೆಗಳಲ್ಲಿ ನಡೆಯುವ ರಾಜಕೀಯ ಧ್ರುವೀಕರಣವು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದೆ.







