ನವದೆಹಲಿ : ಕಳೆದ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ಭೀಕರ ಗುಂಡಿನ ದಾಳಿಗೆ 25 ಅಮಾಯಕರು ಬಲಿಯಾಗಿದ್ದರು. ಅದಾದ ಬಳಿಕ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಮೂಲಕ 100ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದು ಸೇಡು ತೀರಿಸಿಕೊಂಡಿತು. ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಭಯೋತ್ಪಾದಕರು ಮುಸ್ಲಿಮರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಮೀರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಚಿತ್ರ ಬಿಡುಗಡೆಗೆ ಸಿದ್ಧತೆಯಾಗಿದ್ದು, ಸಿನಿಮಾ ಪ್ರಚಾರದಲ್ಲಿರುವ ಅವರು ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಹೇಳಿಕೆ ನೀಡಿದ್ದು, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆಯೂ ಆಮಿರ್ ಖಾನ್ ಮುಕ್ತವಾಗಿ ಮಾತನಾಡಿದ್ದಾರೆ. ಆಮಿರ್ ಖಾನ್ ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂದರ್ಶನದ ಸಮಯದಲ್ಲಿ ಆಮಿರ್ ಖಾನ್ ಅವರಿಗೆ ಪಹಲ್ಗಾಮ್ ದಾಳಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಅಮೀರ್ ಖಾನ್ ಮತ್ತಷ್ಟು ಹೇಳುತ್ತಾ, ಯಾವುದೇ ಧರ್ಮವು ನಮಗೆ ಮುಗ್ಧ ಜನರನ್ನು ಕೊಲ್ಲಲು ಕಲಿಸುವುದಿಲ್ಲ. ಅವರು ನಮ್ಮ ಜನರನ್ನು ಕೊಂದರು. ಇದು ಯಾವ ರೀತಿಯ ವಿಧಾನ? ಇದು ಮಾನವೀಯತೆಯ ಮೇಲಿನ ದಾಳಿ. ನಾನು ಭಯೋತ್ಪಾದಕರನ್ನು ಮುಸ್ಲಿಮರೆಂದು ಪರಿಗಣಿಸುವುದಿಲ್ಲ. ಉಗ್ರರು ಮುಸ್ಲಿಮರಲ್ಲ ಎಂದು ಆಮಿರ್ ಖಾನ್ ಹೇಳಿದ್ದಾರೆ.
ನಾನು ಭಯೋತ್ಪಾದಕರನ್ನು ಮುಸ್ಲಿಂ ಎಂದು ಕೂಡ ಪರಿಗಣಿಸುವುದಿಲ್ಲ. ನೀವು ಯಾವುದೇ ಮುಗ್ಧ ವ್ಯಕ್ತಿಗೆ ಹಾನಿ ಮಾಡಬಾರದು ಎಂದು ಇಸ್ಲಾಂ ಸ್ಪಷ್ಟವಾಗಿ ಹೇಳುತ್ತದೆ. ನೀವು ಮಹಿಳೆಯರು ಅಥವಾ ಮಕ್ಕಳ ವಿರುದ್ಧ ನಿಮ್ಮ ಕೈ ಎತ್ತುವಂತಿಲ್ಲ. ಈ ಎಲ್ಲಾ ತತ್ವಗಳು ನಮ್ಮ ಧರ್ಮದ ಭಾಗವಾಗಿದೆ. ಈ ಭಯೋತ್ಪಾದಕರು ಮಾಡುತ್ತಿರುವುದು ಧರ್ಮದ ವಿರುದ್ಧ, ಅವರು ತಪ್ಪು ಮಾಡುತ್ತಿದ್ದಾರೆ ಎಂದು ಆಮಿರ್ ಖಾನ್ ಹೇಳಿದ್ದಾರೆ.
ನಮ್ಮ ಸೈನ್ಯದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಕಾರ್ಗಿಲ್ ಯುದ್ಧದಲ್ಲಿ ಗೆದ್ದಾಗ, ಕಾರ್ಗಿಲ್ನಲ್ಲಿ 8 ದಿನಗಳ ಕಾಲ ಉಳಿದು ಎಲ್ಲಾ ರೆಜಿಮೆಂಟ್ಗಳನ್ನು ಭೇಟಿಯಾದ ಏಕೈಕ ವ್ಯಕ್ತಿ ನಾನು. ಅವರನ್ನು ಪ್ರೋತ್ಸಾಹಿಸಲು ನಾನು ಅಲ್ಲಿಗೆ ಹೋಗಿದ್ದೆ. ನಮ್ಮ ಸೇನೆಯ ಮೇಲೆ ವಿಶ್ವಾಸವಿದೆ ಎಂದು ಆಮಿರ್ ಖಾನ್ ಹೇಳಿದ್ದಾರೆ.