ಶಿವಮೊಗ್ಗ : ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆ ಸಿಗಂದೂರು ಸೇತುವೆ ಜುಲೈ 14ರಂದು ಲೋಕಾರ್ಪಣೆ ಆಗಲಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ಉದ್ಘಾಟಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ಥಳ ಇನ್ನಷ್ಟೆ ನಿಗದಿ ಆಗಬೇಕಿದೆ.ಇಂದಿನಿಂದ ಎರಡನೇ ಹಂತದ ಲೋಡ್ ಟೆಸ್ಟ್ ನಡೆಯಲಿದೆ. ಅಲ್ಲದೆ ಕೊನೆಯ ಹಂತದ ಕೆಲಸ ಕಾರ್ಯ ಬಾಕಿ ಇದೆ ಎಂದು ತಿಳಿಸಿದರು.
ಇನ್ನು, ಸರ್ಕಾರದ ಆದೇಶದಲ್ಲಿ ಈ ಸೇತುವೆಗೆ ಹೊಳೆಬಾಗಿಲು ಕಳಸವಳ್ಳಿ ಸೇತುವೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ರಾಘವೇಂದ್ರ ತಿಳಿಸಿದರು.