ಬೆಂಗಳೂರು : 17 ವರ್ಷಗಳ ವನವಾಸ ದ ಬಳಿಕ ಅವಮಾನ, ಟ್ರೊಲ್ ಎಲ್ಲವನ್ನು ಸಹಿಸಿಕೊಂಡು ಇದೀಗ ಐಪಿಎಲ್ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ ಎತ್ತಿ ಹಿಡಿದಿದೆ. 2025ರ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ಸನ್ಮಾನಿಸಲಿದ್ದಾರೆ.
ಹೌದು ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಬರಮಾಡಿಕೊಳ್ಳಲು ತವರಿನ ಅಭಿಮಾನಿಗಳು ಸಜ್ಜಾಗಿದ್ದಾರೆ. ಆರ್ಸಿಬಿ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ತಂಡದ ಆಟಗಾರರು, ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಗೆ ಸನ್ಮಾನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಅಹಮದಾಬಾದ್ನಿಂದ ಆರ್ಸಿಬಿ ಆಟಗಾರರು ನಿರ್ಗಮಿಸಿದ್ದು, ಮಧ್ಯಾಹ್ನ 1:30ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಆರ್ಸಿಬಿ ತಂಡದ ಆಟಗಾರರು, ತರಬೇತುದಾರರು, ವ್ಯವಸ್ಥಾಪಕರು ಸೇರಿದಂತೆ ತಂಡದ ಸದಸ್ಯರನ್ನು ಸನ್ಮಾನಿಸಲಿದ್ದಾರೆ.
ಬಳಿಕ ಆರ್ಸಿಬಿ ತಂಡದ ಆಟಗಾರರು ವಿಧಾನಸೌಧದಿಂದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದವರೆಗೂ ತೆರೆದ ಬಸ್ನಲ್ಲಿ ವಿಜಯೋತ್ಸವ ಯಾತ್ರೆಯಲ್ಲಿ ತೆರಳಲಿದ್ದಾರೆ. ತೆರೆದ ಬಸ್ನಲ್ಲಿ ಆರ್ಸಿಬಿ ಆಟಗಾರರು ಬೆಂಗಳೂರಿನಲ್ಲಿ ರೋಡ್ ಶೋ ಮೂಲಕ ಸಂಚರಿಸಲಿದ್ದಾರೆ. ನೆಚ್ಚಿನ ತಂಡದ ಆಟಗಾರರನ್ನು ಕಣ್ತುಂಬಿಕೊಳ್ಳಲು ಗಾರ್ಡನ್ ಸಿಟಿಯ ಅಭಿಮಾನಿಗಳು ಕಾತರರಾಗಿದ್ದಾರೆ.