ತುಮಕೂರು : ಹೇಮಾವತಿ ಲಿಂಕ್ ಕೆನಾಲ್ ಗೆ ವಿರೋಧಿಸಿ, ಜನಪ್ರತಿನಿಧಿಗಳು, ರೈತಮುಖಂಡರು, ಸ್ವಾಮೀಜಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರು ಬಿಜೆಪಿ ನಾಯಕರು ಹಾಗೂ ಮಠಾಧೀಶರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಡಳಿತ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಹೌದು ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಬಿಜೆಪಿ ಶಾಸಕರು ಮಠಾಧೀಶರು ರೈತರಿಂದ ಭಾರಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಹೆದ್ದಾರಿಗೆ ಮಣ್ಣು ಸುರಿದು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದರು. ಆಕ್ರೋಶದ ಕಿಚ್ಚಿನ ಬಳಿಕ ಇದೀಗ ಹೇಮಾವತಿ ಕೆನಾಲ್ ಲಿಂಕ್ ಕಾಮಗಾರಿಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ.
ರಸ್ತೆಯಲ್ಲಿಯೇ ಅಡ್ಡಲಾಗಿ ಮಲಗಿ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರ ಮನವೊಲಿಕೆಗೆ ಪೊಲೀಸರು ಹರಸಾಹಸಪಟ್ಟಿದ್ದಾರೆ. ಆದಾಗ್ಯೂ ಪ್ರತಿಭಟನೆ ಹಿಂಪಡೆಯದ ಹೋರಾಟಗಾರರು ಕೆನಾಲ್ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಮಾರ್ಗಮಧ್ಯೆಯೇ ತಡೆದು ವಶಕ್ಕೆ ಪಡೆದಿದ್ದಾರೆ.