ಬೆಂಗಳೂರು : ಹಾಸನ ಜಿಲ್ಲೆ ಹೊಳೆನರಸೀಪುರ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಜೂನ್ 27ಕ್ಕೆ ಮುಂದೂಡಿ ಆದೇಶ ಹೊರಡಿಸಿತು.
ಹೊಳೆನರಸೀಪುರ ಪ್ರಕರಣದಲ್ಲಿ ಸಾಕ್ಷಿಯ ವಿಚಾರಣೆಯೇ ಆರಂಭವಾಗಿಲ್ಲ. ವಿಚಾರಣೆ ಆರಂಭವಾಗದೆ ಜೈಲಿನಲ್ಲಿ ಕಳೆಯುವಂತಾಗಿದೆ. ಈ ಕೇಸ್ ನಲ್ಲಿ 150 ಸಾಕ್ಷಿಗಳ ವಿಚಾರಣೆ ಆಗಬೇಕಿದೆ. ಸದ್ಯಕ್ಕೆ ವಿಚಾರಣೆ ಮುಗಿಯುವ ಸಾಧ್ಯತೆ ಇಲ್ಲ. ಹಾಗಾಗಿ ಜಾಮೀನು ನೀಡಬೇಕು. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನು ಪೊಲೀಸರು ವಶಕ್ಕೂ ತೆಗೆದುಕೊಂಡಿಲ್ಲ. ಹೀಗಾಗಿ ಷರತ್ತು ವಿಧಿಸಿ ಜಾಮೀನು ನೀಡುವಂತೆ, ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಾಗಿ ಕೋರ್ಟಿಗೆ ಮನವಿ ಮಾಡಿದರು.
ಈ ವೇಳೆ ಸರ್ಕಾರದ ಪರವಾಗಿ ಎಸ್ ಪಿ ಪಿ ರವಿವರ್ಮ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ಕೇಸ್ನಲ್ಲಿ ಈಗಾಗಲೇ ಸಾಕ್ಷಿಗಳ ವಿಚಾರಣೆ ಅಂತಿಮ ಹಂತದಲ್ಲಿದೆ. ಕೋರ್ಟ್ ವಿಚಾರಣೆ ಅಡ್ಡಿಪಡಿಸಲು ಪ್ರಜ್ವಲ್ ರೇವಣ್ಣ ಮತ್ತು ಅವರ ತಾಯಿಯವರು ಯತ್ನಿಸಿದ್ದಾರೆ. ಸಾಕ್ಷಿಯ ವಿಚಾರಣೆ ವಿಳಂಬಿಸಲು ಪ್ರಯತ್ನ ಮಾಡಿದ್ದಾರೆ. ಕೋರ್ಟ್ ಮುಂದೆ ವಾದಿಸಲು ಪ್ರಜ್ವಲ್ ರೇವಣ್ಣಗೆ ಅರ್ಹತೆ ಇಲ್ಲವೆಂದು ಎಸ್ ಪಿ ಪಿ ರವಿವರ್ಮ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಹೈಕೋರ್ಟ್ ಜಾಮೀನು ಅರ್ಜಿಯನ್ನು ಜೂನ್ 27ಕ್ಕೆ ಮುಂದೂಡಿ ಆದೇಶ ಹೊರಡಿಸಿತು.