ನವದೆಹಲಿ : ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ ಯೋಜನೆ ಗಗನಯಾನ 3ನ್ನ 2024ರಲ್ಲಿ ಉಡಾವಣೆ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರ ನೇಪಥ್ಯದಲ್ಲಿ, ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತ ಸರ್ಕಾರವು 2022ಕ್ಕೆ ಮಾನವ ಬಾಹ್ಯಾಕಾಶಯಾನ ಮಿಷನ್ ಯೋಜಿಸಿದೆ. ಆದ್ರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎಲ್ಲವೂ ಅಸ್ತವ್ಯಸ್ತಗೊಂಡಿದೆ. ಇನ್ನು 2022ರಲ್ಲಿ ಮೊದಲ ಮಾನವ ಬಾಹ್ಯಾಕಾಶಯಾನ ಮಿಷನ್ ಅನ್ನು ಪ್ರಾರಂಭಿಸುವ ಗುರಿಯನ್ನ ಸರ್ಕಾರ ಹೊಂದಿದೆ, ಏಕೆಂದರೆ ಈ ವರ್ಷವು ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತದೆ. ಗಗನಯಾನ ಕಾರ್ಯಕ್ರಮದ ಮೊದಲ ಪರೀಕ್ಷಾರ್ಥ ಹಾರಾಟವು ಈ ವರ್ಷದ ಕೊನೆಯಲ್ಲಿ ನಡೆಯಲಿದೆ” ಎಂದು ಸಿಂಗ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕೋವಿಡ್ -19 ಸಾಂಕ್ರಾಮಿಕವು ರಷ್ಯಾ ಮತ್ತು ಭಾರತದಲ್ಲಿ ಗಗನಯಾತ್ರಿಗಳ ತರಬೇತಿಯ ಮೇಲೆ ಪರಿಣಾಮ ಬೀರಿದೆ ಎಂದು ಸಚಿವರು ಹೇಳಿದರು. ಗಗನಯಾನ ಕಾರ್ಯಕ್ರಮದ ಎರಡು ಪರೀಕ್ಷಾ ಹಾರಾಟಗಳಲ್ಲಿ ಗಗನಯಾನ 1 ಮೊದಲನೆಯದು. ಗಗನಯಾನ 1ರ ಭಾಗವಾಗಿ 2022ರ ಕೊನೆಯಲ್ಲಿ ಬಾಹ್ಯಾಕಾಶಕ್ಕೆ ಮೂವರು ವ್ಯಕ್ತಿಗಳನ್ನ ಸಾಗಿಸುವ ಸಾಮರ್ಥ್ಯವನ್ನು ಹೊಂದಿರುವ ಅನ್ಕ್ರೂವ್ಡ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ನಿರೀಕ್ಷೆಯಿದೆ.