ದಕ್ಷಿಣಕನ್ನಡ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಯುವಕನೊಬ್ಬ ಅಪ್ರಾಪ್ತೆ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬಲ್ಲಿ ನಡೆದಿದೆ.
ಶಿರ್ಲಾಲು ಗ್ರಾಮದ ನಿವಾಸಿ ಸನತ್ (28ವ) ಎಂಬಾತನೇ ಅತ್ಯಾಚಾರವೆಸಗಿದ ಆರೋಪಿಯಾಗಿದ್ದಾನೆ.ಆರೋಪಿ ಸನತ್ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಬಾಲಕಿಯ ತಂದೆಯೊಂದಿಗೆ ಅಗಾಗ ಮನೆಗೆ ಬರುತ್ತಿದ್ದ. ಈ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಸಲುಗೆಯಿಂದ ಇದ್ದನೆನ್ನಲಾಗಿದೆ. ಬಾಲಕಿಯ ಜನ್ಮ ದಿನದ ಕಾರ್ಯಕ್ರಮಕ್ಕೆ ಬಂದು ಆರೋಪಿ ರಾತ್ರಿ ಮನೆಯಲ್ಲಿ ಉಳಿದುಕೊಂಡಿದ್ದಾನೆ.
ರಾತ್ರಿ ವೇಳೆ ಬಾಲಕಿ ಮಲಗಿದ್ದ ಕೋಣೆಗೆ ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದನೆಂದು ದೂರಿನಲ್ಲಿ ಆರೋಪಿಸಲಾಗಿದೆ. ನಂತರದ ದಿನಗಳಲ್ಲಿ ಕೂಡಾ ಆಗಾಗ ರಾತ್ರಿ ವೇಳೆಯಲ್ಲಿ ಬಂದು ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಇದೀಗ ಆರೋಪಿ ಸನತ್ ವಿರುದ್ದ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.