ಉತ್ತರಕನ್ನಡ : ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಗೋಕರ್ಣಕ್ಕೆ ತೆರಳಿದ್ದಾರೆ. ಈ ವೇಳೆ ಸಮುದ್ರದಲ್ಲಿ ಈಜಲು ತೆರಳಿದ್ದ ಯುವಕಯೊಬ್ಬ ಸಮುದ್ರಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಾವಿಕೊಡ್ಲ ಕಡಲ ತೀರದಲ್ಲಿ ನಡೆದಿದೆ.
ಪ್ರವಾಸಕ್ಕೆ ತೆರಳಿದ್ದವರಲ್ಲಿ ಕೋಲಾರದ ಶ್ರೀನಿವಾಸಪುರದ ವಿನಯ ಎಸ್.ವಿ (22) ನೀರುಪಾಲಾದ ವಿದ್ಯಾರ್ಥಿಯಾಗಿದ್ದು, ಆತನ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.ಇನ್ನುಳಿದಂತೆ ಆತನೊಂದಿಗೆ ತೆರಳಿದ್ದ ಇನ್ನೂ ಐವರನ್ನು ರಕ್ಷಿಸಲಾಗಿದ್ದು ಅಸ್ವಸ್ಥರಾಗಿರುವ ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನ ಖಾಸಗಿ ಫಾರ್ಮಸಿ ಕಾಲೇಜಿನ ಒಟ್ಟು 48 ವಿದ್ಯಾರ್ಥಿಗಳು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಸಮುದ್ರಲ್ಲಿ ಮೋಜು ಮಸ್ತಿ ಮಾಡಲು ತೆರಳಿ ಈ ಅವಘಡ ನಡೆದಿದೆ.ಅಪಾಯದಲ್ಲಿದ್ದವರನ್ನ ಗಮನಿಸಿ ಸ್ಥಳೀಯರಾದ ದುಬ್ಬಸಸಿಯ ಸರ್ವೇಶ ಮೊರ್ಜೆ ಮತ್ತು ಪಂಢರಿನಾಥ ಮೂರ್ಜೆ ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಇವರಿಗೆ ಕರಾವಳಿ ಕಾವಲು ಪೊಲೀಸ್ ಪಡೆಯವರು ಸಹಕರಿಸಿ ಹರಸಾಹಸ ಪಟ್ಟು ಒಟ್ಟು ಐವರನ್ನು ದಡಕ್ಕೆ ತಂದು ಪ್ರಾಣ ಉಳಿಸಿದ್ದಾರೆ.