ಚಿಕ್ಕಮಗಳೂರು : ಇತ್ತೀಚಿಗೆ ಕೇರಳ ಮೂಲದ ಯುವತಿ ಒಬ್ಬಳು ಟ್ರೇಕ್ಕಿಂಗ್ ಗೆ ಎಂದು ಹೋದಾಗ ನಾಪತ್ತೆಯಾಗಿದ್ದಳು ಸತತ ಮೂರು ದಿನಗಳ ಬಳಿಕ ಕಾಡು ಜನರ ಸಹಾಯದಿಂದ ಶರಣ್ಯ ಪತ್ತೆಯಾಗಿದ್ದಳು ಆದರೆ ಇದೀಗ ಅದೇ ಕೇರಳ ಮೂಲದ ಅಪ್ರಾಪ್ತ ಬಾಲಕಿ ಒಬ್ಬಳು ಚಿಕ್ಕಮಂಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಹೌದು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ 14 ವರ್ಷದ ಕೇರಳ ಮೂಲದ ಬಾಲಕಿ ಶ್ರೀ ನಂದಾ ನಾಪತ್ತೆಯಾಗಿದ್ದಾಳೆ. 40 ಜನರ ಪ್ರವಾಸಿ ತಂಡದೊಂದಿಗೆ ಬಂದಿದ್ದ ಶ್ರೀ ನಂದಾ ಮಾಣಿಕ್ಯಧಾರಾ ಬಳಿ ಕಾಣೆಯಾಗಿದ್ದು, ಕೂಡಲೇ ಸ್ಥಳೀಯರು ಹುಡುಕಾಟ ನಡೆಸಿದ್ದರು. ಇದೀಗ ಅಗ್ನಿಶಾಮಕ, ಅರಣ್ಯ, ಪೊಲೀಸ್ ಇಲಾಖೆಗಳು ಡ್ರೋನ್ ಸಹಾಯದಿಂದ ಬಾಲಕಿಯ ಶೋಧ ಕಾರ್ಯದಲ್ಲಿ ತೊಡಗಿವೆ.
ರಾತ್ರಿ ಪೂರ್ತಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸಂಯುಕ್ತವಾಗಿ ಶೋಧ ಕಾರ್ಯ ನಡೆಸಿದರು. ಇಂದೂ ಡ್ರೋನ್ ಸಹಾಯದಿಂದ ಹುಡುಕಾಟ ಮುಂದುವರಿದಿದ್ದು, ಸಂಪೂರ್ಣ ಹುಲ್ಲುಗಾವಲು ಹಾಗೂ ಇಳಿಜಾರು ಪ್ರದೇಶಗಳಿಂದ ಕೂಡಿರುವ ಈ ಪ್ರದೇಶದಲ್ಲಿ ಕಾರ್ಯಾಚರಣೆ ಸವಾಲಿನದ್ದಾಗಿದೆ.
ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ 14 ವರ್ಷದ ಈ ಬಾಲಕಿ ಪೋಷಕರೊಂದಿಗೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಚಂದ್ರದ್ರೋಣ ಪರ್ವತ ಸರಣಿಯ ಮಾಣಿಕ್ಯಧಾರಾ ಸಮೀಪದಲ್ಲಿ ಕಾಣೆಯಾಗಿರುವುದು ತಿಳಿದುಬಂದಿದೆ. ಬಾಲಕಿ ಕಾಣೆಯಾಗುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪ್ರವಾಸಿಗರು ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಸಿಗಲಿಲ್ಲ.ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.








