ಬೆಳಗಾವಿ : ಕಳೆದ ಏಪ್ರಿಲ್ 28ರಂದು ಕೇಂದ್ರ ಸರ್ಕಾರ ಬೆಲೆ ಏರಿಕೆ ವಿರೋಧಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜನೆ ಮಾಡಿತ್ತು. ಈ ಒಂದು ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಾಗ ಬಿಜೆಪಿ ಮಹಿಳಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಈ ವೇಳೆ ಎಸ್ ಪಿ ನಾರಾಯಣ ಭರಮನಿಯವರನ್ನು ವೇದಿಕೆಗೆ ಕರೆದು ಸಿಎಂ ಸಿದ್ದರಾಮಯ್ಯ ಕೈ ಎತ್ತಿ ಹೊಡೆಯಲು ಮುಂದಾಗಿದ್ದರು. ಈ ಒಂದು ಘಟನೆಯನ್ನು ಖಂಡಿಸಿ ಇದೀಗ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಹೌದು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಏ.28ರಂದು ನಗರದಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ಭದ್ರತೆಗೆ ಧಾರವಾಡದ ಎಎಸ್ಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವೇದಿಕೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವಾಗ, ಬಿಜೆಪಿ ಕಾರ್ಯಕರ್ತೆಯರು ನುಗ್ಗಿ ಪ್ರತಿಭಟಿಸಿದರು. ಗದ್ದಲ ಎಬ್ಬಿಸಿದರು. ಇದರಿಂದ ಕೋಪಗೊಂಡ ಸಿ.ಎಂ ಸ್ಥಳದಲ್ಲಿದ್ದ ನಾರಾಯಣ ಭರಮನಿ ಅವರ ಮೇಲೆ ಕೋಪಗೊಂಡು ಹೊಡೆಯಲು ಮುಂದಾದರು.
ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ನಾಡಿನ ಸಮಸ್ತ ಚಿಂತನೆ- ಮಂಥನೆಗಳಿಗೆ ಧ್ವನಿಯಾಗುವುದರ ಮೂಲಕ ಕಾರ್ಯಾಂಗದ ಅಧಿಕಾರಿಗಳನ್ನು ಉತ್ತೇಜಿಸುವುದನ್ನು ಮರೆತು, ಕರ್ತವ್ಯ ನಿರತ ಅಧಿಕಾರಿಗೆ ಕೀಳು ಪದಗಳನ್ನು ಬಳಕೆ ಮಾಡಿದ್ದಲ್ಲದೇ ಗದರಿಸುವ ಧ್ವನಿಯಲ್ಲಿ ‘ಪೋಲಿಸ್ ಸಮವಸ್ತ್ರದ ಮೇಲಿರುವ ಅವರನ್ನು ಹೊಡೆಯಲು ಹೋಗಿ ಅವರ ಆತ್ಮಸ್ಥೆರ್ಯವನ್ನು ಕುಗ್ಗಿಸುವಂಥ ಕೆಲಸ ಮಾಡಿದ್ದಾರೆ. ಶಾಸಕಾಂಗದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಅವರ ಈ ನಡೆಯು ಸಂಪೂರ್ಣವಾಗಿ ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಹಿನ್ನೆಲೆ?
ಸಮಾವೇಶದಲ್ಲಿ ಅವ್ಯವಸ್ಥೆ ಮತ್ತು ಗೊಂದಲ ಆಗಿರುವುದು ಕಂಡು ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು, ಭದ್ರತೆ ನಿಗಾ ವಹಿಸಿದ್ದ ಪೊಲೀಸರತ್ತ ಕೈ ಮಾಡಿದರು. ಧಾರವಾಡದ ಎಎಸ್ಪಿ ನಾರಾಯಣ ಭರಮನಿ ಅವರು ವೇದಿಕೆ ಏರಿ ಬರುತ್ತಿದ್ದಂತೆಯೇ, ಅವರ ಮೇಲೆ ಕೈ ಎತ್ತಲು ಸಿದ್ದರಾಮಯ್ಯ ಮುಂದಾದರು. ಭರಮನಿ ತಕ್ಷಣವೇ ಹಿಂದೆ ಸರಿದರು.
‘ಯಾರಯ್ಯ ಬೆಳಗಾವಿ ಎಸ್ಪಿ? ಏನು ನಡೆಯುತ್ತಿದೆ ಇಲ್ಲಿ? ಏನ್ ಮಾಡುತ್ತಿದ್ದೀರಿ ನೀವೆಲ್ಲ’ ಎಂದು ಸಿದ್ದರಾಮಯ್ಯ ರೇಗಿದರು. ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ನಾಸಿರ್ ಹುಸೇನ್ ಹಾಗೂ ಸಚಿವ ಎಚ್.ಕೆ.ಪಾಟೀಲ ಅವರು ಸಮಾಧಾನಪಡಿಸಿದರು.
ಈ ಎಲ್ಲದರ ಮಧ್ಯೆ ವೇದಿಕೆಯತ್ತ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತೆಯರನ್ನು ಪೊಲೀಸರು ಹೊರಕ್ಕೆ ಎಳೆದೊಯ್ದರು. ಹೊರಗೆ ನಿಂತಿದ್ದ ಕಾಂಗ್ರೆಸ್ನ ಕಾರ್ಯಕರ್ತರು ಪೊಲೀಸ್ ವಾಹನಕ್ಕೆ ಮುತ್ತಿಗೆ ಹಾಕಿದರು. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಿದ್ದರಾಮಯ್ಯ ಅವರು ಕೆಲಹೊತ್ತು ಭಾಷಣ ನಿಲ್ಲಿಸಿದರು.