ಹಾಸನ : ಅನ್ನ ಹಾಕಿದ ಮಾಲೀಕನಿಗೆ ದ್ರೋಹ ಬಗೆದ ಕಾರ್ಮಿಕರು ಇದೀಗ ಆತನನ್ನೇ ಭೀಕರವಾಗಿ ಕೊಲೆ ಮಾಡಿ ಆತನ ಮೈಮೇಲಿದ್ದ ಚಿನ್ನವನ್ನು ದೋಚಿ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಅರಸೀಕೆರೆ ನಗರದ ಸುಬ್ರಹ್ಮಣ್ಯ ನಗರ ಬಡಾವಣೆ ಯ ನಿವಾಸಿ ವಿಜಯ್ ಕುಮಾರ್(46) ಎನ್ನುವರನ್ನು ಕಾರ್ಮಿಕರು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಅರಸೀಕೆರೆ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ಡಿಪೋ ಮುಂಭಾಗದಲ್ಲಿ ಕಾಂಟ್ರಕ್ಟರ್ ವಿಜಯ್ ಕುಮಾರ್ ನನ್ನು ಚಿನ್ನದ ಒಡವೆಗಳನ್ನು ದೋಚುವುದಕ್ಕಾಗಿ ಅವರ ಬಳಿ ಕೆಲಸ ಮಾಡುತ್ತಿದ್ದವರೇ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಅಷ್ಟೆ ಅಲ್ಲದೇ ಕೊಲೆ ಮಾಡಿದ ಬಳಿಕ ವಿಜಯ್ ಮೈಮೇಲಿದ್ದ ಬಂಗಾರದ ಚಿನ್ನ ಹಾಗೂ ಕೈನಲ್ಲಿದ್ದ ಉಂಗುರಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಅಚ್ಚರಿ ಅಂದ್ರೆ ಉಂಗುರು ತೆಗೆಯಲು ಬರಲಿಲ್ಲವೆಂದು ಕೈ ಬೆರಳನ್ನೇ ಕಟ್ ಮಾಡಿಕೊಂಡು ಕೊಂಡೊಯ್ದಿದ್ದಾರೆ. ವಿಕ್ರಂನಿಗೆ ಮೊದಲಿನಿಂದಲೂ ವಿಜಯ್ ಕುಮಾರ್ ಮೈಮೇಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿತ್ತು.
ಈ ಸಂಬಂಧ ಪತ್ನಿ ಹಾಗೂ ಮಕ್ಕಳನ್ನು ಊರಿನಲ್ಲಿ ಬಿಟ್ಟು ಮತ್ತೋರ್ವ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದ. ಬಂದು ಒಂದು ವಾರದಲ್ಲಿ ನೆಪವೊಂದನ್ನು ಹೇಳಿ ವಿಜಯ್ ಕುಮಾರ್ ನನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಹತ್ಯೆ ಮಾಡಿದ್ದಾರೆ. ಬಳಿಕ ವಿಜಯ್ ಮೈಮೇಲಿದ್ದ ಚಿನ್ನದ ಸರ, ಉಂಗುರ ಹಾಗೂ ಹಣ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಕೊಲೆ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.