ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದು, ಗಾಂಜಾ, ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಮಾಲು ಸಮೇತ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬುಕ್ಕಸಾಗರ ಕೆರೆ ಬಳಿ ಬಂಧಿಸಲಾಗಿದೆ.
ಬಂಧಿತರನ್ನು ಒಡಿಶಾದ ಬದ್ರಕ್ ಜಿಲ್ಲೆ ಮೂಲದ ಮಾಸ್ತೇನಹಳ್ಳಿ ವಾಸಿ ಬಿಗ್ ಬಾಸ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ (24), ಅಸ್ಸಾಂನ ದೆಮಾಜಿ ಜಿಲ್ಲೆ ಮೂಲದ ವೀರಸಂದ್ರದ ಪ್ಲಿಪ್ಕಾರ್ಟ್ ಉದ್ಯೋಗಿ ಬಿಸ್ವಜಿತ್ ದಾವೊ(24), ಅಸ್ಸಾಂನ ಕರಿಮಾಗಂಜ್ ಜಿಲ್ಲೆ ಮೂಲದ ವೀರಸಂದ್ರ ಡೆಲಿವರಿ ಬಾಯ್ ಜಾಕಿರ್ ಹುಸೇನ್ (24), ಮಂಗಳೂರು ನಗರ ಮೂಲದ ತಿರುಪಾಳ್ಯ ವಾಸಿ ಚಾಲಕ ಸರ್ಪುದ್ದೀನ್ (28) ಬಂದಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 88 ಗ್ರಾಂ ಎಂಡಿಎಂಎ, 01.100 ಕಿಲೋ ಗಾಂಜಾ, 04.06 ಗ್ರಾಂ ಹೆರಾಯಿನ್, 4 ಸಿರೆಂಜ್, 4 ಮೊಬೈಲ್ ಸಮೇತ ಎರಡು ಬೈಕ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮಾದಕವಸ್ತು ಮಾರಾಟ ನಿಷೇಧ ಕಾಯಿದೆಯಂತೆ ಪ್ರಕರಣ ದಾಖಲಿಸಿರುವ ಜಿಗಣಿ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪರಪ್ಪನ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.