ವಿಜಯಪುರ : ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಮಂಗಳವಾರ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ ನೀಡಲಾಯಿತು. ಸಾಧು-ಸಂತರ ಮೂಲಕ ಈಶ್ವರಪ್ಪ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಇಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಉದ್ಘಾಟನೆ ಮಾಡಲಾಯಿತು. ಕೆ.ಎಸ್ ಈಶ್ವರಪ್ಪರಿಂದ ಕನ್ನೆರಿ ಮಠದ ಕಾಡಸಿದ್ದೇಶ್ವರ ಶ್ರೀಗಳ ಪಾದಪೂಜೆ ನೆರವೇರಿತು. ಶ್ರೀಗಳಿಗೆ ಪಾದಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೆ ವೇಳೆ ಕನ್ನೆರಿ ಮಠದ ಸ್ವಾಮೀಜಿ ಕ್ರಾಂತಿವೀರ ಬ್ರಿಗೇಡ್ ಲಾಂಛನ ಬಿಡುಗಡೆ ಮಾಡಿದರು.
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ಈಶ್ವರಪ್ಪ ಗೋ ಪೂಜೆ ಸಲ್ಲಿಸಿದರು. ನೀಲಕಂಠ ಶಾಸ್ತ್ರಿಗಳ ನೇತೃತ್ವದಲ್ಲಿ ವೇದ ಘೋಷಗಳ ಪಠಣ ನಡೆಯಿತು.ಇದೇ ವೇಳೆ, 1008 ಸಾಧು ಸಂತರ ಪಾದ ಪೂಜೆಯನ್ನು ನೆರವೇರಿಸಲಾಯಿತು. ಇದಕ್ಕೂ ಮುನ್ನ 1008 ಮಹಿಳೆಯರು ಕುಂಭ, ಕಲಾ ತಂಡಗಳು ಹಾಗೂ ವಾದ್ಯಗಳೊಂದಿಗೆ ಮೆರವಣಿಗೆ ಜರುಗಿತು.
ಈ ಹಿಂದೆ ರಾಯಣ್ಣ ಬ್ರಿಗೇಡ್ ಮೂಲಕ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ್ದ ಈಶ್ವರಪ್ಪ ಕ್ರಾಂತಿವೀರ ಬ್ರಿಗೇಡ್ ಸ್ಥಾಪಿಸಿದ್ದಾರೆ.ವೇದಿಕೆ ಕಾರ್ಯಕ್ರಮದಲ್ಲಿ ಬ್ರಿಗೇಡ್ ನ ಲಾಂಛನ ಹಾಗೂ ಗೀತೆಯನ್ನು ಬಿಡುಗಡೆಗೊಳಿಸಲಾಯಿತು. ಕನಕಗುರು ಪೀಠದ ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪೂರಿ ಸ್ವಾಮೀಜಿ, ಸೋಮಲಿಂಗೇಶ್ವರ ಸ್ವಾಮೀಜಿ, ಇಂಗಳೇಶ್ವರ ಸ್ವಾಮೀಜಿ, ಕಾರ್ಯಾಧ್ಯಕ್ಷ ರಾಕೇಶ ಈಶ್ವರಪ್ಪ, ಸೇರಿದಂತೆ ಅನೇಕ ನಾಯಕರು, ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದಾರೆ.