ಪಶ್ಚಿಮ ಬಂಗಾಳದ ಬಹುಕೋಟಿ ಕಲ್ಲಿದ್ದಲು ಅಕ್ರಮ ಸಾಗಾಣಿಕೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ತಂತ್ರಗಾರಿಕೆ ಸಂಸ್ಥೆಯಾದ ಐ-ಪ್ಯಾಕ್ (I-PAC) ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ವಿನೇಶ್ ಚಂದೇಲ್ ಅವರನ್ನು ಜಾರಿ ನಿರ್ದೇಶನಾಲಯ (ED) ಸೋಮವಾರ ರಾತ್ರಿ ಬಂಧಿಸಿದೆ.
ಪಶ್ಚಿಮ ಬಂಗಾಳದ ಕಲ್ಲಿದ್ದಲು ಗಣಿಗಳಿಂದ ಅಕ್ರಮವಾಗಿ ಹಣ ಗಳಿಸಿ, ಅದನ್ನು ಹವಾಲಾ ಮಾರ್ಗಗಳ ಮೂಲಕ ಐ-ಪ್ಯಾಕ್ ಸಂಸ್ಥೆಗೆ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪ ವಿನೇಶ್ ಚಂದೇಲ್ ಮೇಲಿದೆ. ಸುಮಾರು 20 ಕೋಟಿ ರೂಪಾಯಿ ಅಕ್ರಮ ಹಣದ ವರ್ಗಾವಣೆಯಲ್ಲಿ ಇವರ ಪಾತ್ರವಿದೆ ಎಂದು ಇಡಿ ಶಂಕಿಸಿದೆ.
ವಿನೇಶ್ ಚಂದೇಲ್ ಅವರನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದ್ದು, ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು (ಮಂಗಳವಾರ) ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಇಡಿ ಕಸ್ಟಡಿಗೆ ಕೋರುವ ಸಾಧ್ಯತೆಯಿದೆ.
ಈ ಬಂಧನಕ್ಕೂ ಮೊದಲು, ಏಪ್ರಿಲ್ 2 ರಂದು ದೆಹಲಿ, ಬೆಂಗಳೂರು ಮತ್ತು ಮುಂಬೈನ ವಿವಿಧ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನಲ್ಲಿ ಮತ್ತೊಬ್ಬ ಸಹ-ಸಂಸ್ಥಾಪಕ ರಿಶಿ ರಾಜ್ ಸಿಂಗ್ ಅವರ ನಿವಾಸದ ಮೇಲೂ ದಾಳಿ ನಡೆದಿತ್ತು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಡೆದಿರುವ ಈ ಬಂಧನವು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಐ-ಪ್ಯಾಕ್ ಸಂಸ್ಥೆಯು ಅಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ಚುನಾವಣಾ ತಂತ್ರಗಾರಿಕೆಯಲ್ಲಿ ನೆರವು ನೀಡುತ್ತಿದೆ.








