ಬಾಗಲಕೋಟೆ : ಬಾಗಲಕೋಟೆಯಲ್ಲಿ ಮನೆ ಮುಂದೆ ಹಚ್ಚಿದ ದೀಪದಿಂದ ಘೋರ ದುರಂತವೊಂದು ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಎಂಟು ಜನ ಗಾಯಗೊಂಡು, ಏಳು ಬೈಕ್ಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಜರುಗಿದೆ. ಇಂದು ಮುಂಜಾನೆ ಸುಮಾರು 2.30ರ ಸುಮಾರಿಗೆ ಸಿಲಿಂಡರ್ ಸ್ಫೊಟಗೊಂಡಿದೆ.
ಘಟನೆಯಲ್ಲಿ ಒಟ್ಟು 8 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಕಲ್ಮೇಶ್ ದರಿಯಪ್ಪ ಲೋಕಣ್ಣಬಾರ (30 ವರ್ಷ), ಸಚಿನ್ ಪ್ರಕಾಶ್ ಮೇರಿ (28), ಗಣೇಶ್ (26), ದಾಪು ದೇವಿ (28), ಡಿಂಪಲ್ ಪಟೇಲ್ (1 ವರ್ಷ), ಸ್ನೇಹಾ (22), ಐಶ್ವರ್ಯಾ (13) ಹಾಗೂ ಶ್ರುತಿ (23) ಎಂದು ಗುರುತಿಸಲಾಗಿದೆ.
ಈ ಘಟನೆಯಲ್ಲಿ, ಏಳು ಬೈಕ್ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಲ್ಲದೆ, ಮೂವರು ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಮೂವರು ಪುರುಷರು ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.