ವಿಜಯಪುರ : ವಸತಿ ಯೋಜನೆಯಲ್ಲಿ ಮನೆ ಹಂಚಿಕೆಯಲ್ಲಿ ಲಂಚ ಪಡೆದಿರುವ ಕುರಿತು ಕಲ್ಬುರ್ಗಿ ಜಿಲ್ಲೆಯ ಆಳಂದ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಹಾಗೂ ಸಚಿವ ಜಮೀರ್ ಅಹ್ಮದ್ ಆಪ್ತ ಸರ್ಫರಾಜ್ ಖಾನ್ ಮಾತನಾಡಿರುವ ವೈರಲ್ ಸದ್ಯ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ ಡಾ. ಬಿ.ಆರ್ ಅಂಬೇಡ್ಕರ್ ವಸತಿ ನಿವಾಸ ಯೋಜನೆಯಲ್ಲೂ ಕೂಡ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.
ಹೌದು ಡಾ.ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಮನೆ ಹಂಚಲು ಪ್ರತಿ ಫಲಾನುಭವಿಯಿಂದ 40,000 ಲಂಚ ನೀಡಬೇಕೆಂಬ ಆರೋಪ ಕೇಳಿ ಬಂದಿದೆ. ರಾಂಪುರ ಪಿ.ಎ ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ ಹಣ ವಸೂಲಿ ಆರೋಪ ಕೇಳಿ ಬಂದಿದ್ದು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ಪಿಎ ಗ್ರಾಮ ಪಂಚಾಯತಿಯಲ್ಲಿ ಈ ಒಂದು ಭ್ರಷ್ಟಾಚಾರ ನಡೆದಿದೆ.
ರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗಣಿಹಾರ,ಗಣಿಹಾರ ತಾಂಡ, ರಾಂಪುರ ತಾಂಡ,ಬೆನಕವಟಗಿ, ಬೆನಕವಟಗಿ ತಾಂಡ, ಬಬಲೇಶ್ವರ ಗ್ರಾಮಗಳಲ್ಲಿನ ಫಲಾನುಭವಿಗಳಿಂದ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಾಂಪುರದ ಗ್ರಾಮ ಪಂಚಾಯತಿ ಸದಸ್ಯರಿಬ್ಬರಿಂದ ವಾಟ್ಸಾಪ್ ಗ್ರೂಪ್ ನಲ್ಲಿ ಆಡಿಯೋ ಸಹ ವೈರಲ್ ಆಗಿದ್ದು, ಪಿಂಟು ರಾಠೋಡ್ ಮತ್ತು ಮೊಹಮ್ಮದ್ ಇಂಚಗೇರಿ ಮಾತನಾಡಿರುವ ಆಡಿಯೋಗಳು ವೈರಲ್ ಆಗಿವೆ.
ನಮ್ಮ ತಾಂಡಾ ವ್ಯಾಪ್ತಿಯಲ್ಲಿ ನಿಮ್ಮ ಊರಿನ ಫಲಾನುಭವಿಗಳನ್ನು ಹಾಕಬಾರದು ಎಂದು ಗ್ರಾಮ ಪಂಚಾಯತ ಸದಸ್ಯ ಪಿಂಟು ರಾಠೋಡ್ ಮಾತನಾಡಿದ್ದಾನೆ. ಇದನ್ನು ಮತ್ತೊರ್ವ್ ಗ್ರಾಂ ಪಂಚಾಯತ್ ಸದಸ್ಯ ಮೊಹಮ್ಮದ್ ಇಂಚಗೇರಿ ಪ್ರಶ್ನೆ ಮಾಡಿದ್ದು, ಹಾಗಾದರೆ ಒಂದು ಮನೆಗೆ 40,000 ಲಂಚ ಕೊಡಿ 40,000 ಇಲ್ಲಿ ಕೇಳುತ್ತಿದ್ದಾರೆ ಎಂದು ಮೊಹಮ್ಮದ್ ಇಂಚಗೇರಿ ಹೇಳಿದ್ದಾನೆ.
ನಿನಗೆ ಲಂಚ ಕೊಡಲ್ಲ ಎಂದು ಪಿಂಟು ರಾಠೋಡ್ ಹೇಳಿದ್ದು, ಪಿಂಟು ರಾಠೋಡ್ ಮತ್ತು ಮೊಹಮ್ಮದ್ ಇಂಚಗೇರಿ ಮಾತನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ. ಪ್ರತಿ ಮನೆಗೆ 40,000 ಪಡೆಯುತ್ತಿರುವುದು ಈ ಮೂಲಕ ಬಹಿರಂಗವಾಗಿದೆ. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸಲು ವಿಪಕ್ಷಗಳು ಇದೀಗ ಆಗ್ರಹಿಸಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿವೆ.