ಚಿಕ್ಕಮಗಳೂರು : ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಈ ಪ್ರಕರಣ ಸಂಬಂಧ ಬಜರಂಗದಳದ ಕಾರ್ಯಕರ್ತ ಸಂಜಯ್, ನಾಗಭೂಷಣ್ ಸೇರಿದಂತೆ ಹಲವರ ಮೇಲೆ ಕೇಸ್ ದಾಖಲಾಗಿದೆ. ಅಷ್ಟೇ ಅಲ್ಲ ಇಬ್ಬರನ್ನು ಬಂಧಿಸಲಾಗಿದೆ. ಇದೀಗ ಸಖರಾಯಪಟ್ಟಣ ಪೊಲೀಸರಿಂದ ಮತ್ತೆ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖಾರಾಯಪಟ್ಟಣದ ಲೋಕೇಶ್ ತುಮಕೂರು ಮೂಲದ ಕಿಶೋರ್ ಹಾಗೂ ಮದನ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಗಣೇಶ ಕೊಲೆ ನಡೆಯುವ ದಿನ ಸಂಜೆ ಜೊತೆಗೆ ಕಿಶೋರ್ ಮತ್ತು ಮದನ್ ಇದ್ದರು ಎಂದು ತಿಳಿದುಬಂದಿದೆ.
ಪ್ರಕರಣ ಹಿನ್ನೆಲೆ
ಡಿಸೆಂಬರ್ 5 ರ ರಾತ್ರಿ ಸಖರಾಯಪಟ್ಟಣದ ಮಠದ ಗುತ್ತಿ ರಸ್ತೆಯಲ್ಲಿ ಬಜರಂಗದಳ ಕಾರ್ಯಕರ್ತರು ಹಾಗೂ ಗಣೇಶ್ಗೌಡ ಟೀಂ ನಡುವೆ ಗ್ಯಾಂಗ್ವಾರ್ ಆಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಬ್ಯಾನರ್, ಫ್ಲೆಕ್ಸ್ ತೆರುವ ಮಾಡುವಾಗ, ‘‘ಇವರದ್ದು ಜಾಸ್ತಿಯಾಯ್ತು’’ ಎಂದು ಗಣೇಶ್ ಗೌಡ ಗಲಾಟೆ ಮಾಡಿದ್ದ ಎನ್ನಲಾಗಿದೆ. ದತ್ತಜಯಂತಿಗೆ ಅಳವಡಿಸಿದ್ದ ಬ್ಯಾನರ್ ತೆರವು ವೇಳೆ ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಗಲಾಟೆ ಆಗಿತ್ತು. ಇದೇ ಗಲಾಟೆಯಲ್ಲಿ ಗಣೇಶ್ಗೌಡನನ್ನು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದರು.
ಸಖರಾಯಪಟ್ಟಣದಲ್ಲಿ ಡಿಸೆಂಬರ್ 5ರ ರಾತ್ರಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಉಂಟಾದ ಗಲಾಟೆ ಕೊಲೆಯೊಂದಿಗೆ ಅಂತ್ಯವಾಗಿತ್ತು. ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡರನ್ನು ಸಂಜಯ್ ಮತ್ತು ಮಿಥುನ್ ಎಂಬವರು ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಗಲಾಟೆಯಲ್ಲಿ ಆರೋಪಿ ಸಂಜಯ್ ತಲೆಗೂ ಗಂಭೀರ ಗಾಯವಾಗಿತ್ತು. ನಂತರ ಬಜರಂಗದಳದ ಕಾರ್ಯಕರ್ತ ಸಂಜಯ್, ನಾಗಭೂಷಣ್ ಸೇರಿದಂತೆ ಹಲವರನ್ನು ಬಂಧಿಸಿದ್ದ ಪೊಲೀಸರು, ಪ್ರಕರಣ ದಾಖಲಿಸಿದ್ದರು.








