ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಹಾಲಿ ಶಾಸಕ ಲಕ್ಷ್ಮಣ ಸವದಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ರಮೇಶ್ ಜಾರಕಿಹೊಳಿ ಸ್ಪೋಟಕವಾದ ಹೇಳಿಕೆ ನೀಡಿದ್ದು, ಹಾಲಿ ಶಾಸಕ ಲಕ್ಷ್ಮಣ್ ಸವದಿ ಮರಳಿ ಬಿಜೆಪಿಗೆ ಬರುತ್ತಾರೆ ಎಂಬ ವದಂತಿಗಳ ಬಗ್ಗೆ ನಮ್ಮ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವುದು ಬೇಡ. ಸದ್ಯ ಹಾಲಿ ಶಾಸಕರು ಕ್ಷೇತ್ರದಲ್ಲಿ ಅಂತದೊಂದು ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದಿದ್ದಾರೆ.
ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸವದಿ ಕ್ಷೇತ್ರದಲ್ಲಿ ಬಿಜೆಪಿಗೆ ಮರಳಿ ಬರುವ ವಾತಾವರಣ ಸೃಷ್ಟಿ ಮಾಡಿದ್ದಾರೆ. ಯಾರನ್ನೇ ಕೇಳಿದ್ರೂ ಮುಂದೆ ಸವದಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆಂದು ಹೇಳುತ್ತಿದ್ದಾರೆ. ಅಂತಹ ಪ್ರಸಂಗ ಬರುವುದಿಲ್ಲ, ಬರೋದಕ್ಕೆ ನಾವು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಸವದಿ ಬಿಜೆಪಿಗೆ ಬರುವುದಿಲ್ಲ. ಬಂದರೂ ಅವತ್ತು ದೇವರು ಯಾವ ರೀತಿ ಬುದ್ದಿ ಕೊಡುತ್ತಾನೆ. ಆ ರೀತಿ ನಾವು ಪ್ರತಿಕ್ರಿಯೆ ಕೊಡುತ್ತೇವೆ ಎಂದರು.
ನಮ್ಮ ಕಾರ್ಯಕರ್ತರು ಗಟ್ಟಿಯಾಗಿ ಕೆಲಸ ಮಾಡಬೇಕು. ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ 2028ರ ವಿಧಾನಸಭಾ ಚುನಾವಣೆಗೆ ಬೂತ್ ಮಟ್ಟದಲ್ಲಿ ಬಿಜೆಪಿಯನ್ನು ಕಟ್ಟುವ ಕೆಲಸ ಮಾಡಬೇಕು. 2018ರಲ್ಲಿ ನಮಗೆ ಹೇಗೆ ಯಶಸ್ಸು ಸಿಕ್ಕಿತ್ತೋ ಅದೇ ರೀತಿಯ ಯಶಸ್ಸನ್ನು ಮತ್ತೆ ತಂದುಕೊಡಬೇಕು ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.








