ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ಎಮ್ ರೇವಣ್ಣ ಅವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲ್ಲೆಗೆ ಒಳಗಾದಂತಹ ಕಾಂಗ್ರೆಸ್ ಕಾರ್ಯಕರ್ತ ಇದೀಗ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರಿಗೆ ದೂರು ನೀಡಿದ್ದಾರೆ.
ಹೌದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ರಾಜ್ಯ ಮಹಿಳಾ ಆಯೋಗಕ್ಕೆ ಹಲ್ಲೆಗೆ ಒಳಗಾದ ಕಾಂಗ್ರೆಸ್ ಕಾರ್ಯಕರ್ತೆ ನಂದಿನಿ ನಾಗರಾಜು ದೂರು ನೀಡಿದ್ದಾರೆ. ನಿನ್ನೆ ಕುಮಾರ ಕೃಪಾ ಗೆಸ್ಟ್ ಹೌಸ್ ನಲ್ಲಿ HM ರೇವಣ್ಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರಿಗೆ ದೂರು ನೀಡಿದ್ದಾರೆ.
ನಂದಿನಿ ಅವರು ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೇ ನಾಗಲಕ್ಷ್ಮಿ ಚೌದರಿ ಅವರು, ಹೆಣ್ಣು ಮಕ್ಕಳ ಮೇಲೆ ಯಾರೂ ದೌರ್ಜನ್ಯ ಮಾಡಂಗಿಲ್ಲ. ಹೆಚ್ ಎಂ ರೇವಣ್ಣ ಆಗಲಿ ಬೇರೆ ಯಾರೇ ಆಗಲಿ ತಪ್ಪು ತಪ್ಪೇ. ರೇವಣ್ಣ ಅವರಿಗೂ ಪತ್ರ ಬರೆದು ಅವರಿಂದ ಪ್ರತಿಕ್ರಿಯೆ ಕೇಳುತ್ತೇನೆ. ನಂದಿನಿ ನಾಗರಾಜು ಎಂಬವರು ಹಲ್ಲೆ ಕುರಿತು ದೂರು ಕೊಟ್ಟಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ತಿಳಿಸಿದ್ದಾರೆ.