ರಾಮನಗರ : ಚನ್ನಪಟ್ಟಣದ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ದೇವಾಲಯ ಒಂದರಲ್ಲಿ ಜೆಡಿಎಸ್ ಸಭೆ ಬಳಿಕ ಇನ್ನೊಂದು ವಾರದಲ್ಲಿ ಚನ್ನಪಟ್ಟಣ ಬೈ ಎಲೆಕ್ಷನ್ ದಿನಾಂಕ ಘೋಷಣೆ ಆಗುತ್ತೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಕಳೆದ ಎರಡು ಚುನಾವಣೆಯನ್ನ ನಿರಂತರವಾಗಿ ಈ ಕ್ಷೇತ್ರದಿಂದ ಗೆದ್ದಿದ್ದೇವೆ. ಈ ಕ್ಷೇತ್ರದ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಾನು ಯಾವುದೇ ನಿರ್ಣಯ ಮಾಡಲ್ಲ. 2013ರಲ್ಲೂ ಕೇವಲ 3 ಸಾವಿರ ಮತಗಳಲ್ಲಿ ಸೋತಿದ್ದೇವೆ. 2018, 23ರಲ್ಲಿ ನಿರಂತರವಾಗಿ ಗೆದ್ದಿದ್ದೇವೆ. ಮೊದಲಿನಿಂದಲೂ ಇದು ಜನತಾದಳದ ಭದ್ರಕೋಟೆ ಎಂದಿದ್ದಾರೆ.
ಇನ್ನು ಕೋವಿಡ್ ಹಗರಣದ ಕುರಿತು ಎಸ್ ಐ ಟಿ ರಚನೆ ವಿಚಾರವಾಗಿ,ಈ ಭಜನೆ ಒಂದುವರೆ ವರ್ಷದಿಂದ ನಡೆಯುತ್ತಿದೆ. ಇವರುಗಳು ವಿರೋಧ ಪಕ್ಷದಲ್ಲಿ ಕೆಲಸ ಮಾಡುವಾಗ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದರು. ಪಿಎಸಿಎಲ್ ಚೇರ್ಮನ್ ಅವರ ಪಕ್ಷದವರೇ ಇದ್ದಾರೆ. ಇಲ್ಲಿಯವರೆಗೆ ಯಾವುದೇ ರೀತಿಯ ತನಿಖೆ ಮಾಡಿಲ್ಲ. ಈಗ ಏಕೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನಿಮಗೆ ನಿಜಕ್ಕೂ ರಾಜ್ಯದ ತೆರಿಗೆ ಹಣ ಲೂಟಿ ಬಗ್ಗೆ ಮಾಹಿತಿ ಇದ್ದರೆ ಯಾವಾಗಲೋ ತನಿಖೆ ಆಗಬೇಕಿತ್ತು. ಈಗ ನಿಮ್ಮ ಪರಿಸ್ಥಿತಿಗಳ ರಕ್ಷಣೆ ಪಡೆಯಲು ಈ ರೀತಿಯ ಬೆಳವಣಿಗೆ ಪ್ರಾರಂಭ ಮಾಡಿದ್ದೀರಿ. ಇದು ಯಾವುದೇ ರೀತಿಯಲ್ಲಿ ಫಲ ನೀಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.