ಬೆಂಗಳೂರು : ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಮಹಿಳೆ ಯನ್ನು ಬಂಧಿಸದಿದ್ದರೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಿಎಂಟಿಸಿ ಎಲೆಕ್ಟ್ರಿಕ್ ವೆಹಿಕಲ್ ಬಸ್ ಚಾಲಕರು 110ಕ್ಕೂ ಹೆಚ್ಚು ಬಸ್ಗಳನ್ನು ಪೀಣ್ಯ ಡಿಪೋದಲ್ಲಿ ನಿಲ್ಲಿಸುವ ಮೂಲಕ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ಶನಿವಾರ ಬೆಂಗಳೂರಿನ ಸುಮ್ಮನಹಳ್ಳಿ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ಮೇಲೆ ಮಹಿಳೆ ಅಟ್ಟಹಾಸ ಮೆರೆದಿದ್ದಳು. ಮುಂದೆ ಹೋಗುತ್ತಿದ್ದ ಸ್ಕೂಟರ್ಗೆ ಬಸ್ ತಾಗಿದ್ದಕ್ಕೆ ಉಗ್ರರೂಪ ತಾಳಿದ ಮಹಿಳೆ ಬಸ್ಸಿಗೆ ನುಗ್ಗಿ ಪ್ರಯಾಣಿಕರ ಎದುರೇ ಹಿಗ್ಗಾಮುಗ್ಗಾ ಥಳಿಸಿದ್ದಳು.ಪ್ರಕರಣ ಸಂಬಂಧ, ಘಟನೆ ಖಂಡಿಸಿ ಡಿಪೋ 22 ಚಾಲಕರು ಬಸ್ ತೆಗೆಯದೇ ಪ್ರತಿಭಟನೆ ಮಾಡಿದರೆ ಅತ್ತ ಹಲ್ಲೆ ಮಾಡಿದ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಬಿಎಂಟಿಸಿ ಚಾಲಕನದ್ದೇ ತಪ್ಪು ಎಂದು ಆರೋಪ ಮಾಡಿದ್ದಾಳೆ.
ಚಾಲಕನ ಮೇಲೆ ಹಲ್ಲೆ ನಡೆದು ಒಂದು ದಿನ ಕಳೆದರೂ ಮಹಿಳೆಯನ್ನು ಇನ್ನೂ ಬಂಧಿಸಿಲ್ಲ. ಹಲ್ಲೆ ಮಾಡಿದ ಮಹಿ ಳೆಯ ವಿರುದ್ದ ಕಾನೂನು ರೀತ್ಯ ಕ್ರಮಕೈಗೊಳ್ಳುವವರೆಗೂ ಬಸ್ಗಳನ್ನು ತೆಗೆಯುವುದಿಲ್ಲ ಎಂದು ಚಾಲಕರು ಪಟ್ಟು ಹಿಡಿದಿದ್ದಾರೆ. ಬಿಎಂಟಿಸಿ ಸಂಸ್ಥೆ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸುವ ಪ್ರಯತ್ನ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.
ಘಟನೆ ಹಿನ್ನೆಲೆ:
ಶನಿವಾರ ಜಾಲಹಳ್ಳಿ ಕ್ರಾಸ್ನಿಂದ ಕೆಆರ್ ಮಾರುಕಟ್ಟೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್, ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಬೈಕ್ವೊಂದಕ್ಕೆ ಟಚ್ ಆಗಿತ್ತು. ಆಗ ಕೋಪಗೊಂಡ ಬೈಕ್ ಓಡಿಸುತ್ತಿದ್ದ ಮಹಿಳೆ, ಡಿಪೋ 22ರ ಬಿಎಂಟಿಸಿ ಬಸ್ ಚಾಲಕ ಅಮರೇಶ್ ಎಂಬುವರಿಗೆ ಮನ ಬಂದಂತೆ ಥಳಿಸಿದ್ದರು. ಮಹಿಳೆಯ ಜೊತೆಗೆ ಮತ್ತೊಬ್ಬ ಹಲ್ಲೆ ಮಾಡಿದ್ದರಿಂದ ಬಸ್ನಲ್ಲಿಯೇ ಚಾಲಕ ಕುಸಿದು ಬಿದ್ದಿದ್ದ. ಈ ಕುರಿತು ಮಹಿಳೆ ಮತ್ತು ಬಸ್ ಚಾಲಕ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ನೀಡಿದ್ದಾರೆ.