ಚಿಕ್ಕಮಗಳೂರು : ಮನೆ ಮಾರಾಟ ಮಾಡಿದ್ದರು ಸಹ ಮನೆಯನ್ನು ತೊರೆದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಾವನನ್ನೇ ಬಾಮೈದ ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮಂಜು (50) ಎಂದು ತಿಳಿದುಬಂದಿದೆ.ಇನ್ನು ಬಾವನನ್ನೇ ಕೊಂದ ಬಾಮೈದನನ್ನು ಗೋಪಾಲ್ ಎಂದು ಹೇಳಲಾಗುತ್ತಿದೆ. ಕೊಲೆಯಾದ ಮಂಜು ತನ್ನ ಬಾಮೈದನಿಗೆ ಕಳೆದ 3 ವರ್ಷಗಳ ಹಿಂದೆ 25,000 ಕ್ಕೆ ಮನೆಯನ್ನು ಮಾರಾಟ ಮಾಡಿದ್ದಾನೆ. 3 ವರ್ಷಗಳ ಹಿಂದೆಯೇ ಮನೆ ಮಾರಾಟ ಮಾಡಿದ್ದರು ಸಹ ಮಂಜು ಮನೆಯನ್ನು ಬಿಟ್ಟಿರಲಿಲ್ಲ.
ಹೀಗಾಗಿ ಗೋಪಾಲ್ ಎಷ್ಟೇ ಬಾರಿ ಎಚ್ಚರಿಕೆ ನೀಡಿದರೂ ಸಹ ಮಂಜು ಮನೆಯನ್ನು ತೊರೆದಿರಲಿಲ್ಲ. ಆದರೆ ಇಂದು ಇಬ್ಬರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಗೋಪಾಲ ಅಲ್ಲೇ ಇದ್ದ ಇಟ್ಟಿಗೆ ಯನ್ನು ತೆಗೆದುಕೊಂಡು ಮಂಜು ತಲೆಗೆ ಹೊಡೆದಿದ್ದಾನೆ. ತಕ್ಷಣ ಮಂಜುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಂಜು ಸಾವನ್ನಪ್ಪಿದ್ದಾನೆ.