ಬೆಂಗಳೂರು : ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಥ ಪಾಕಿಸ್ತಾನ ಇದೆ ಎಂದು ಹೇಳಿಕೆ ನೀಡಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ, ದಿನೇಶ್ ಗುಂಡೂರಾವ್ ಪತ್ನಿ ತಬಸ್ಸುಮ್, ಯತ್ನಾಳ್ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಇಂದು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಪ್ರಕರಣಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಖಾರವಾಗಿ ತಿಳಿಸಿತು.
ಗಾಂಧಿನಗರ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪತ್ನಿ ತಬಸ್ಸುಮ್ ರಾವ್ ಅವರು ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸುವಂತೆ ಕೋರಿ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿ, ಪತ್ನಿ ಮುಸ್ಲಿಂ ಎಂದ ಮಾತ್ರಕ್ಕೆ ಈ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಪೀಠ, ನಿರ್ದಿಷ್ಟ ಸಮುದಾಯವನ್ನು ನೀವು ಹಾಗೆ ವ್ಯಾಖ್ಯಾನಿಸಲಾಗದು ಎಂದು ತಿಳಿಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಧೀಶರು ನಿಮಗೆ ಎಷ್ಟು ಬಾರಿ ಹೇಳಲಾಗಿದೆ? ಇದೆಲ್ಲಾ ಏಕೆ ಬೇಕು? ಇದೆಲ್ಲವನ್ನು ನೀವೇಕೆ ಮಾತನಾಡಬೇಕು? ನಿಮ್ಮ ಮನಸ್ಸಿಗೆ ಬಂದಿದ್ದೆಲ್ಲವನ್ನೂ ಮಾತನಾಡುತ್ತೀರಲ್ಲ. ಅರ್ಧ ಪಾಕಿಸ್ತಾನ ಎಂದರೆ ಏನರ್ಥ? ಇದಕ್ಕೆ ಯತ್ನಾಳ್ ಪರ ವಕೀಲರು, ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿ ಹೇಳಿಕೆ ನೀಡಲಾಗಿದೆಯಷ್ಟೇ. ಮಾರನೇಯ ದಿನ ಸ್ಪಷ್ಟನೆಯನ್ನೂ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಆ ಹೇಳಿಕೆ ನೀಡಿಲ್ಲ. ನಾಳೆಗೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಅದಕ್ಕೆ ತಡೆ ನೀಡಬೇಕು ಎಂದು ಕೋರಿದರು.
ಈ ವೇಳೆ ಪೀಠ, ಪ್ರಕರಣಕ್ಕೆ ತಡೆ ನೀಡುವುದಕ್ಕೆ ಸಾಧ್ಯವಿಲ್ಲ. ಬಿಎನ್ಎಸ್ಎಸ್ ಸೆಕ್ಷನ್ 200ರ ಅಡಿ ಸಂಜ್ಞೆ ಪರಿಗಣಿಸುವುದಕ್ಕೂ ಮುನ್ನ ಆರೋಪಿಯ ವಾದವನ್ನು ಆಲಿಸಬೇಕು. ಇಲ್ಲಿ ಪ್ರಕ್ರಿಯೆ ಲೋಪ ಕಾಣುತ್ತಿದೆ. ಹಾಗಾಗಿ, ಸೆಪ್ಟೆಂಬರ್ 23ರಂದು ಹೊಸದಾಗಿ ನಿಯಮದ ಪ್ರಕಾರ ಸಂಜ್ಞೆ ಪರಿಗಣಿಸಲು ಅಧೀನ ನ್ಯಾಯಾಲಯಕ್ಕೆ ಪ್ರಕರಣವನ್ನು ಮರಳಿಸಲಾಗುವುದು ಎಂದು, ವಿಚಾರಣೆ ಮುಂದೂಡಿತು.