ಹಾಸನ : ಮೈಕ್ರೋ ಫೈನಾನ್ಸ್ ನಿಂದ ಕಳೆದ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು. ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕಿರುಕುಳ ತಡೆಗೆ ಸುಗ್ರೀವಾಜ್ಞೆ ಕೂಡ ಜಾರಿ ಮಾಡಿದ್ದು, ಆದರೂ ಕೂಡ ಮೈಕ್ರೋಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಪ್ಪಿಲ್ಲ. ಇದೀಗ ಹಾಸನ ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹೌದು ರೈತರೊಬ್ಬರು ಫೈನಾನ್ಸ್ ಕಿರುಕುಳ ಮತ್ತು ಸಾಲದ ಒತ್ತಡ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲ್ಲೂಕಿನ ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯ ಜೋಡಿಮಲ್ಲಪ್ಪನಳ್ಳಿ ಗ್ರಾಮದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ವೆಂಕಟೇಶ್ (48) ಎಂದು ತಿಳಿದಬಂದಿದೆ.
ವೆಂಕಟೇಶ್ ಫೈನಾನ್ಸ್ಗಳಿಂದ 3 ಲಕ್ಷ 70 ಸಾವಿರ, ಬ್ಯಾಂಕ್, ವ್ಯವಸಾಯ ಸಹಕಾರ ಸಂಘ, ಧರ್ಮಸ್ಥಳ ಸಂಘ ಮತ್ತು ಕೈಸಾಲ ಸೇರಿ 3 ಲಕ್ಷ 90 ಸಾವಿರ, ಒಟ್ಟು 7 ಲಕ್ಷ 60 ಸಾವಿರ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲದ ಹಣವನ್ನು ಪಾವತಿಸುವಂತೆ ಫೈನಾನ್ಸ್ ಸಂಸ್ಥೆಗಳಿಂದ ನಿರಂತರ ಕಿರುಕುಳಕ್ಕೊಳಗಾಗಿದ್ದ ಇವರು ಮನನೊಂದು ಅವರು ಈ ಕೃತ್ಯಕ್ಕೆ ಶರಣಾಗಿದ್ದಾರೆ ಆರೋಪಿಸಲಾಗಿದೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.