ಬೆಂಗಳೂರು : ರಾಜ್ಯ ಇಂಧನ ಇಲಾಖೆಯಲ್ಲಿ ಟ್ರಾನ್ಸ್ಫಾರ್ಮರ್ ಹಂಚಿಕೆ ವೇಳೆ ಸುಮಾರು 80 ರಿಂದ 90 ಕೋಟಿ ರು. ಮೊತ್ತದ ಅಕ್ರಮ ನಡೆಸಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.
ಹೌದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯಲ್ಲಿ ಈ ಹಗರಣ ನಡೆದಿದ್ದು, ಟ್ರಾನ್ಸ್ಫಾರ್ಮರ್ ವಿತರಣೆಯಲ್ಲಿ ಕೆಲ ಹೆಸ್ಕಾಂ ಅಧಿಕಾರಿಗಳು ಭಾರೀ ಕೈ ಚಳಕ ತೋರಿಸಿದ್ದಾರೆ. ನಗರ ಭಾಗದ ಲೆಕ್ಕ ಕೇಳಿದರೆ ಗ್ರಾಮೀಣ ಭಾಗದ ಕಡೆಗೆ, ಕೃಷಿಕರಿಗೆ ವಿತರಿಸಿದ ಟ್ರಾನ್ಸ್ಫಾರ್ಮರ್ಗಳ ವಿವರಣೆ ಕೇಳಿದರೆ ನಗರದ ಲೆಕ್ಕ ಕೊಟ್ಟು ಇಲಾಖೆಗೆ ಅಧಿಕಾರಿಗಳು ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
9ಕ್ಕೂ ಹೆಚ್ಚಿನ ಖಾಸಗಿ ಕಂಪನಿಗಳ ಜತೆ ಹೆಸ್ಕಾಂನ ದಾಸ್ತಾನು ವಿಭಾಗದ ಮೇಲ್ವಿಚಾರಕ ಸೇರಿ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿತ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಿಐಡಿ ತನಿಖೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಟ್ರಾನ್ಸ್ಫಾರ್ಮರ್ ಹಗರಣದ ಕುರಿತು ಮತ್ತಷ್ಟು ದಾಖಲೆ ಸಲ್ಲಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸಿಐಡಿ ಸೂಚಿಸಿದೆ. ಪ್ರಕರಣ ಸಂಬಂಧ ಕೆಲ ದಾಖಲೆಗಳು ಸಲ್ಲಿಕೆಯಾಗಿವೆ. ಆದರೆ ಹಗರಣದ ಆಳ ಹೆಚ್ಚಾಗಿರುವ ಕಾರಣ ಮತ್ತಷ್ಟು ವಿವರಣೆಯನ್ನು ಹೆಸ್ಕಾಂ ಅಧಿಕಾರಿಗಳಿಂದ ಕೇಳಿದ್ದೇವೆ. ಈ ದಾಖಲೆಗಳ ಸಲ್ಲಿಕೆ ಬಳಿಕ ನೋಟಿಸ್ ಜಾರಿಗೊಳಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ಟ್ರಾನ್ಸ್ಫಾರ್ಮರ್ ವಿತರಣೆ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದಾಗ ದಾಸ್ತಾನು ವಿಭಾಗದ ಮೇಲ್ವಿಚಾರಕ ಸೇರಿ ಕೆಲ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟಿರುವುದು ಸ್ಪಷ್ಟವಾಗಿದೆ. ಹೀಗಾಗಿ ಹೆಸ್ಕಾಂ ವ್ಯಾಪ್ತಿಯಲ್ಲಿ 1500 ಟ್ರಾನ್ಸ್ಫಾರ್ಮರ್ಗಳಲ್ಲಿ ಸುಮಾರು 80-90 ಕೋಟಿ ರು.ನಷ್ಟು ಅಕ್ರಮ ನಡೆದಿದೆ ಎಂಬ ಅಂದಾಜು ಈವರೆಗೆ ಸಿಕ್ಕಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಅಕ್ರಮದ ಮೊತ್ತ ಹೆಚ್ಚಾಗಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.








