ಚಾಮರಾಜನಗರ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಗ್ಯಾಸ್ ಸಿಲೆಂಡರ್ ಡೆಲಿವರಿ ಮಾಡಲು ಬಂದ ಡೆಲಿವರಿ ಬಾಯ್ ನಿಂದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಸಂತಮಾರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಮೇ 21ರಂದು ಮಧ್ಯಾಹ್ನದ ವೇಳೆ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಮಹೇಶ್ ಗ್ಯಾಸ್ ಏಜೆನ್ಸಿಯ ಡೆಲಿವರಿ ಬಾಯ್ ಮಹೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮಹಿಳೆ ಮೈಸೂರಿಗೆ ತೆರಳಲು ಸಿದ್ಧವಾಗುತ್ತಿದ್ದ ವೇಳೆ ಮಹೇಶ್ ಮನೆಗೆ ಬಂದಿದ್ದಾನೆ. ಮನೆಯ ಬಳಿ ಗ್ಯಾಸ್ ಸಿಲಿಂಡರ್ ವಾಹನ ತಂದು ನಿಲ್ಲಿಸಿದ್ದ. ಮನೆ ಬಾಗಿಲು ಬಡಿದು ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳಿ ಅಂದಿದ್ದ.
ಈ ವೇಳೆ ನಾವು ಸಿಲಿಂಡರ್ ಬುಕ್ ಮಾಡಿಲ್ಲ ಎಂದು ಮಹಿಳೆ ನಿರಾಕರಿಸಿದ್ದಾರೆ. ಸಿಲಿಂಡರ್ ಖಾಲಿಯಾಗಿದ್ದರೆ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದ. ಆತನ ಮಾತು ನಂಬಿ 950 ನೀಡಿ ಸಿಲಿಂಡರ್ ಪಡೆದಿದ್ದರು. ಈ ವೇಳೆ ಅಡುಗೆಮನೆ ಫೋಟೋ ತೆಗೆಯಬೇಕು ಅಂತ ಮಹೇಶ್ ಹೇಳಿದ್ದಾನೆ. ಫೋಟೋ ತೆಗೆದು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು ಅಂತ ಹೇಳಿದ್ದಾನೆ. ಅಡುಗೆ ಮನೆಗೆ ಸರಿಯಾಗಿ ಬೆಳಕು ಬರುತ್ತಾ ಪರಿಶೀಲಿಸ ಬೇಕು ಅಂತ ಹೇಳಿದ್ದಾನೆ.
ಮಹೇಶ್ ಮಾತು ನಂಬಿ ಮಹಿಳೆ ಆತನನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾರೆ. ಅಡುಗೆಮನೆ ಮಹಿಳೆ ಕರೆಸಿ, ಸಿಲಿಂಡರ್ ಬಳಿ ನಿಲ್ಲಿಸಿ ಫೋಟೋ ತೆಗೆದಿದ್ದಾನೆ. ನಿಮ್ಮ ದಾಖಲೆ ಇ-ಕೆವೈಸಿ ಮಾಡಬೇಕು ಎಂದು ಸೂಚಿಸಿದ್ದಾನೆ. ನಂತರ ಏಕಾಏಕಿ ಮಹಿಳೆಯ ಮೇಲೆ ಎರಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸಹಕರಿಸದಿದ್ದರೆ ಕೊಲೆ ಮಾಡುವುದಾಗಿ ಮಹೇಶ ಬೆದರಿಕೆ ಹಾಕಿದ್ದಾನೆ. ಮಹಿಳೆ ಪ್ರತಿರೋಧ ತೋರಿದಾಗ ಅಲ್ಲೇ ಇದ್ದ ಚಾಕುವಿನಿಂದ ಮಹಿಳೆಗೆ ಇರಿದಿದ್ದಾನೆ.
ಮಹಿಳೆಯ ಮುಖ ಎದೆ ಭಾಗಕ್ಕೆ ಮಹೇಶ್ ಚಾಕುವಿನಿಂದ ಇರದಿದ್ದಾನೆ. ಮಹಿಳೆ ಜೋರಾಗಿ ಕೂಗಿಕೊಂಡಾಗ ಮಹೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಆರೋಪಿ ಮಹೇಶ್ ನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಘಟನೆ ಕುರಿತಂತೆ ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.