ಶಿವಮೊಗ್ಗ : ಕಾಮಗಾರಿಯೊಂದರ ಬಿಲ್ ಬಿಡುಗಡೆಗಾಗಿ 30 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಶಿವಮೊಗ್ಗ ಜಿಲ್ಲೆಯ ಸೊರಬ ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ (RDWSD) ಸೆಕ್ಷನ್ ಆಫೀಸರ್ ಪರಶುರಾಮ ಎಚ್.ನಾಗರಾಳ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಿಲ್ ಬಿಡುಗಡೆ ಮಾಡಲು ಶೇ 3ರಷ್ಟು ಕಮಿಷನ್ಗೆ ಬೇಡಿಕೆ ಇಟ್ಟಿದ್ದ ಪರಶುರಾಮ ನಾಗರಾಳ, ಗುತ್ತಿಗೆದಾರರಿಂದ ಈಗಾಗಲೇ 1, 63 ಲಕ್ಷ ಪಡೆದಿದ್ದರು. ಇನ್ನೂ 70,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಗುತ್ತಿಗೆದಾರ ಲಿಂಗರಾಜ ಉಳ್ಳಾಗಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ, 30,000 ನೀಡುವಾಗ ದಾಳಿ ನಡೆದಿದೆ.
ಗುತ್ತಿಗೆದಾರ, ಸೊರಬ ತಾಲ್ಲೂಕಿನ ಹಸವಿ ಗ್ರಾಮದ ಲಿಂಗರಾಜ ಉಳ್ಳಾಗಡ್ಡಿ ಅವರು ಚೀಲನೂರು ಹಾಗೂ ಕಣ್ಣೂರು ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಪಿಎಂಶ್ರೀ ಯೋಜನೆಯಡಿ ಎಣ್ಣೆಕೊಪ್ಪ ಗ್ರಾಮದ ಶಾಲೆಯ ದುರಸ್ತಿ ಕಾಮಗಾರಿ ಕೈಗೊಂಡಿದ್ದರು.