ಯಾದಗಿರಿ : ರಾಜ್ಯದಲ್ಲಿ ಒಂದು ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯೊಬ್ಬರ ತಲೆ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ, ಖಾರದ ಪುಡಿ ಎರಚಿ ಅಮಾನುಷವಾಗಿ ವರ್ತಿಸಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದಲ್ಲಿ ನಡೆದಿದೆ.
ಅ.16 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಂಗಾಬಾಯಿ ಶಂಕರ ಚಿನ್ನಾರಾಠೋಡ (35) ಸಂತ್ರಸ್ತೆ ಎಂದು ತಿಳಿದುಬಂದಿದೆ.ಸಂತ್ರಸ್ತೆ ಆರೋಗ್ಯ ಸಮಸ್ಯೆಯಿಂದಾಗಿ ಕಲಬುರಗಿ ಇರುವ ಚಿಕ್ಕಮ್ಮನ ಮನೆಗೆ ಆಗಾಗ ಹೋಗುತ್ತಿದ್ದಳು. ಆಕೆಯ ಅಳಿಯ ರಾಮು ರಾಠೋಡ ಎಂಬಾತ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ. ಆದ್ರೆ ಆರೋಪಿಗಳು ಅಳಿಯನ ಜೊತೆಗೆ ಸಂಬಂಧ ಇಟ್ಟುಕೊಂಡು ಓಡಿ ಹೋಗಿ ಮರ್ಯಾದೆ ತೆಗೆದಿದ್ದೀಯಾ ಅಂತ ನಿಂದಿಸಿ ಮನಸೋಇಚ್ಛೆ ಥಳಿಸಿದ್ದಾರೆ.
ಸುಮಾರು 11 ಜನ ಗಂಗೂಭಾಯಿಯನ್ನ ಒದ್ದು ನೆಲಕ್ಕೆ ಕೆಡವಿದ್ದಾರೆ. ಆಕೆಯನ್ನ ಹಿಡಿದು ತಲೆಕೂದಲು ಕತ್ತರಿಸಿದ್ದಾರೆ. ನಂತರ ತಲೆಗೆ ಸುಣ್ಣ ಹಚ್ಚಿ, ಮೈಮೇಲೆ ಕಾರದಪುಡಿ ಹಾಕಿ ದುಷ್ಕೃತ್ಯ ಎಸಗಿದ್ದಾರೆ. ಜೊತೆಗೆ ಗಂಗಾಭಾಯಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.ಪ್ರಕರಣ ಸಂಬಂಧ ಇಬ್ಬರನ್ನ ಬಂಧಿಸಲಾಗಿದ್ದು, 11 ಜನರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಘಟನೆ ಸಂಬಂಧ ಕೆಂಭಾವಿ ಪೋಲಿಸ್ ಠಾಣೆಯಲ್ಲಿ 11 ಜನರ ವಿರುದ್ಧ ಕೇಸ್ ದಾಖಲಾಗಿದ್ದು, ಕಸ್ತೂರಿಭಾಯಿ, ಡಾಕಪ್ಪ ಇಬ್ಬರನ್ನ ಬಂಧಿಸಲಾಗಿದೆ. ಇನ್ನುಳಿದ ವಿಜಯಕುಮಾರ್, ತಿಪ್ಪಣ್ಣ, ರಮೇಶ, ದೇವಿಭಾಯಿ, ತಿಪ್ಪಿಭಾಯಿ, ರೂಪ್ಲಿಭಾಯಿ, ಅನುಸೂಯಾ, ಚಾವಳಿಭಾಯಿ, ತಿಪ್ಪಣ್ಣ ನಾಯ್ಕ್ ಆರೋಪಿಗಳಿಗಾಗಿ ಕೆಂಭಾವಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.








