ಬೆಂಗಳೂರು : ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ ವಿಚಾರವಾಗಿ ಮಾಜಿ ಸಂಸದೆ ರಮ್ಯಾ ಬೆನ್ನಿಗೆ ಇದೀಗ ಮಹಿಳಾ ಆಯೋಗ ನಿಂತುಕೊಂಡಿದೆ. ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಬೆಂಗಳೂರು ಪೊಲೀಸ್ ಕಮಿಷನರಿಗೆ ಪತ್ರ ಬರೆದಿದ್ದಾರೆ.
ಹೌದು ಮಾಜಿ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯಾರವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ.
ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.
ಈ ವಿಚಾರವಾಗಿ ನಾಗಲಕ್ಷ್ಮಿ ಚೌದರಿ ಮಾತನಾಡಿದ್ದು, ಮನಸ್ಸಿಗೆ ತಕ್ಕಂತೆ ಕಮೆಂಟ್ ಮತ್ತು ಪೋಸ್ಟ್ ಮಾಡೋದು ತಪ್ಪು. ನಟಿ ರಮ್ಯಾ ನಮಗೇನು ಕಾಲ್ ಮಾಡಿಲ್ಲ ಈ ವಿಷಯಗಳಲ್ಲಿ ಯಾರು ಕಾಲ್ ಮಾಡಬೇಕು ಅಂತ ಇಲ್ಲ. ದರ್ಶನ್ ಅಭಿಮಾನಿಗಳ ವಿರುದ್ಧ ನಾನು ಮಾತನಾಡಲ್ಲ ಮಹಿಳೆಯರಿಗೆ ಅನ್ಯಾಯವಾದಾಗ ಆಯೋಗ ಬರುತ್ತದೆ ಎಂದು ನಾಗಲಕ್ಷ್ಮಿ ಚೌದರಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.