ಬೆಂಗಳೂರು : ಸೈಬರ್ ಕ್ರೈಂ ಪ್ರಕರಣದ ತನಿಖೆ ಕೈಗೊಳ್ಳಲು ಇಬ್ಬರು ಪೊಲೀಸ್ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುವಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಮಧುಸೂದನ್ ಬಿ.ಎಸ್. ಎಂಬವರ ಕಂಪನಿಯ ವೆಬ್ಸೈಟ್ ಹ್ಯಾಕ್ ಮಾಡಿ, ಆರ್ಥಿಕ ನಷ್ಟವುಂಟು ಮಾಡಲಾಗಿತ್ತು. ಕೆಲಸದಿಂದ ತೆಗೆದು ಹಾಕಿದ ಸಿಟ್ಟಿಗೆ ಕಂಪನಿಯ ಮಾಜಿ ಉದ್ಯೋಗಿಯೊಬ್ಬನಿಂದ ಕೃತ್ಯ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿ, ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ಮಧುಸೂಧನ್ ದೂರು ನೀಡಿದ್ದರು.
ಆದರೆ ಅನುಮಾನಿತ ಆರೋಪಿಯನ್ನು ವಿಚಾರಣೆ ನಡೆಸಿ ಪ್ರಕರಣದ ತನಿಖೆ ಕೈಗೊಳ್ಳಲು ಪ್ರತಿಯಾಗಿ 4 ಲಕ್ಷ ರೂ. ಲಂಚಕ್ಕೆ ಆರೋಪಿಗಳು ಬೇಡಿಕೆಯಿಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ಮಧುಸೂದನ್ ದೂರು ನೀಡಿದ್ದರು.ಇ ಹಿನ್ನೆಲೆ 2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ ಠಾಣೆಯ ಎಸಿಪಿ ತನ್ವೀರ್ ಎಸ್. ಆರ್. ಹಾಗೂ ಎಎಸ್ಐ ಕೃಷ್ಣಮೂರ್ತಿ ಅವರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.