ಕೋಲಾರ : ಕೋಲಾರದಲ್ಲಿ ಘೋರವಾದ ಘಟನೆ ನಡೆದಿದ್ದು, ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ 9 ವರ್ಷದ ಬಾಲಕ ಸಾವನಪ್ಪಿದ್ದಾನೆ.
ಮೃತ ಬಾಲಕನನ್ನು ಕುಶಾಲ್ (9) ಎಂದು ತಿಳಿದುಬಂದಿದೆ. ಈತ ಚಿತ್ರದುರ್ಗ ಜಿಲ್ಲೆಯ ಮುಳ್ಳಾಲಕೆರೆ ತಾಲಕಟ್ಟೆ ನಿವಾಸಿ ಎಂದು ತಿಳಿದುಬಂದಿದೆ.ಇಂದು ಪೋಷಕರೊಂದಿಗೆ ಬಾಲಕ ದೇವಾಲಯಕ್ಕೆ ಬಂದಿದ್ದ. ಆಟವಾಡುವ ವೇಳೆ ದೇವಸ್ಥಾನದ ಕಲ್ಯಾಣಿಯಲ್ಲಿ ಬಿದ್ದು ಕುಶಾಲ್ ಸಾವನಪ್ಪಿದ್ದಾನೆ. ಘಟನೆ ಕುರಿತಂತೆ ಮುಳಬಾಗಿಲು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.