ದುಮ್ಕಾ:ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, ಜಾರ್ಖಂಡ್ ನ ದುಮ್ಕಾದಲ್ಲಿ ಇಂದು ಬೆಳಿಗ್ಗೆ ದುಷ್ಕರ್ಮಿಗಳು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹನ್ಸ್ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಧೆತ್ ಪಂಚಾಯತ್ನ ಬರ್ದೇಹಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆಗಳು ಇಡೀ ಪ್ರದೇಶದಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿವೆ.
ವರದಿಗಳ ಪ್ರಕಾರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮನೆಯಲ್ಲಿ ಮಲಗಿದ್ದಾಗ ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ, ಆದರೆ ಪತಿಯ ಶವ ಸುಮಾರು 500 ಮೀಟರ್ ದೂರದ ಹೊಲದಲ್ಲಿ ಪತ್ತೆಯಾಗಿದೆ. ಗ್ರಾಮಸ್ಥರು ಬೆಳಿಗ್ಗೆ ಹೊರಗೆ ಹೋದಾಗ, ಶವಗಳು ಪತ್ತೆಯಾಗಿವೆ. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಪೊಲೀಸರು ಶ್ವಾನ ದಳ ಮತ್ತು ವಿಧಿವಿಜ್ಞಾನ ತಂಡವನ್ನು ಕರೆಸಿ ತನಿಖೆ ಆರಂಭಿಸಿದ್ದಾರೆ. ಮೃತರೆಲ್ಲರನ್ನೂ ಗುರುತಿಸಲಾಗಿದೆ. ಮೃತರನ್ನು ಬೀರೇಂದ್ರ ಮಾಂಝಿ (30), ಆರತಿ ಕುಮಾರ್ (24), ರೋಹಿ ಕುಮಾರಿ (4) ಮತ್ತು ವಿರಾಜ್ ಕುಮಾರ್ (2) ಎಂದು ಗುರುತಿಸಲಾಗಿದೆ.ಕೊಲೆಯ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.








