ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಹೈಕೋರ್ಟ್ ನಿರ್ದೇಶನದಂತೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಶಾಸಕ ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
ಶನಿವಾರ ಸಂಜೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯು ಮಧ್ಯರಾತ್ರಿಯವರೆಗೂ ಮುಂದುವರಿಯಿತು. ಈ ವೇಳೆ 2023ರ ಚುನಾವಣೆಯ ಸಮಯದಲ್ಲಿ ‘ಸಿಂಧು’ ಎಂದು ಪರಿಗಣಿಸಲಾಗಿದ್ದ ಹಲವು ಮತಗಳು ಈಗ ‘ಅಸಿಂಧು’ ಎಂದು ಘೋಷಿಸಲ್ಪಟ್ಟಿವೆ.
ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ ಬರೋಬ್ಬರಿ 255 ಮತಗಳು ಕಡಿತಗೊಂಡಿವೆ. ಮತಪತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರಿನ ಮುಂದೆ ‘ಡಬಲ್ ಟಿಕ್’ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ.
ಕಾಂಗ್ರೆಸ್ ಆಕ್ರೋಶ ಮತ್ತು ಟ್ಯಾಂಪರಿಂಗ್ ಆರೋಪ
ಮರು ಎಣಿಕೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕಾಂಗ್ರೆಸ್ ಮುಖಂಡ ಸುದೀರ್ ಕುಮಾರ್ ಮುರೋಳಿ ಅವರು ಗಂಭೀರ ಆರೋಪ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಮತ್ತು ಅಂದಿನ ಚುನಾವಣಾಧಿಕಾರಿ ಮತಗಳನ್ನು ಟ್ಯಾಂಪರಿಂಗ್ (ತಿದ್ದುಪಡಿ) ಮಾಡಿದ್ದಾರೆ ಎಂದು ದೂರಿದ್ದಾರೆ. ರಾಜೇಗೌಡರ ಮತಪತ್ರಗಳಲ್ಲಿ ಉದ್ದೇಶಪೂರ್ವಕವಾಗಿ ಮತ್ತೊಂದು ಟಿಕ್ ಹಾಕಿ ಅವುಗಳನ್ನು ಅಸಿಂಧುಗೊಳಿಸಲಾಗಿದೆ ಎಂಬುದು ಕಾಂಗ್ರೆಸ್ ವಾದ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಅಧಿಕಾರಿಗಳು, “ನಾವು ಸಂಪೂರ್ಣವಾಗಿ ಹೈಕೋರ್ಟ್ ಮಾರ್ಗಸೂಚಿ ಮತ್ತು ಚುನಾವಣಾ ಆಯೋಗದ ಹ್ಯಾಂಡ್ ಬುಕ್ ನಿಯಮಗಳ ಅನ್ವಯವೇ ಎಣಿಕೆ ಮಾಡಿದ್ದೇವೆ. ಸಿಂಧು ಮತ್ತು ಅಸಿಂಧು ಮತಗಳ ನಿರ್ಧಾರದಲ್ಲಿ ಯಾವುದೇ ಪಕ್ಷಪಾತ ನಡೆದಿಲ್ಲ. ಅಂತಿಮ ವರದಿಯನ್ನು ಆಯೋಗಕ್ಕೆ ಸಲ್ಲಿಸಲಾಗಿದೆ,” ಎಂದು ತಿಳಿಸಿದ್ದಾರೆ.








