ಮಂಗಳೂರು : ಕಳೆದ ತಿಂಗಳು ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಬರ್ಬರ ಕೊಲೆಯಾಗಿತ್ತು. ಅದಾದ ನಂತರ ಕೆಲವೇ ದಿನಗಳಲ್ಲಿ ರೆಹಿಮಾನ್ ಎನ್ನುವ ಯುವಕನ ಬರ್ಬರ ಕೊಲೆಯಾಗಿತ್ತು. ಹೀಗೆ ಮಂಗಳೂರಿನಲ್ಲಿ ಕೋಮು ದ್ವೇಷಕ್ಕೆ ಇಬ್ಬರ ಕೊಲೆಯಾಗಿದೆ. ಇನ್ನು ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ ತಡೆಗಟ್ಟಲು ನಿನ್ನೆ ತಾನೇ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸ್ಪೆಷಲ್ ಆ್ಯಕ್ಷನ್ ಫೋರ್ಸ್ (SAF) ಗೆ ಚಾಲನೆ ನೀಡಿದ್ದಾರೆ.
ಇಷ್ಟೆಲ್ಲಾ ಆದರೂ ಕೂಡ ಇದೀಗ ಮಂಗಳೂರಿನಲ್ಲಿ ಮತ್ತೆ ಲಾಂಗು ಮಚ್ಚುಗಳು ಝಳಪಿಸಿದ್ದು, ಓರ್ವ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ತಲ್ವಾರ್ ದಾಳಿಗೆ ಯತ್ನಿಸಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ನಡೆದಿದೆ. ಸಜೀಪಮುನ್ನೂರಿನ ಉಮರ್ ಫಾರೂಕ್ ಮೇಲೆ ದಾಳಿಗೆ ಯತ್ನಿಸಲಾಗಿದೆ.
ಉಮರ್ ಫಾರೂಕ್ ಘಟನೆ ನಡೆದ ದಿನ ಮುಂಜಾನೆ ಮನೆಯಿಂದ ಜೀಪ್ನಲ್ಲಿ ದೇರಳಕಟ್ಟೆಗೆ ತೆರಳುತ್ತಿದ್ದರು. ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ದಾಳಿಗೆ ಯತ್ನಿಸಲಾಗಿದೆ. ತಲ್ವಾರ್ ತಗುಲಿ ಫಾರೂಕ್ ವಾಹನದ ಸೈಡ್ ಮಿರರ್ಗೆ ಹಾನಿ ಆಗಿದೆ. ಘಟನೆ ಬಗ್ಗೆ ನಿನ್ನೆ ಪೊಲೀಸರಿಗೆ ದೂರು ಉಮರ್ ಫಾರೂಕ್ ನೀಡಿದ್ದು, ಬಿಎನ್ಎಸ್ 109, 324(4) ಜೊತೆಗೆ 3(5) BNSರಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.