ಬೆಂಗಳೂರು : ಅಸ್ತಿತ್ವದಲ್ಲೆ ಇಲ್ಲದ ಕಂಪನಿಗಾಗಿ 53 ಎಕರೆ ಭೂಸ್ವಾಧೀನ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ನಡೆ ಸಂವಿಧಾನಕ್ಕೆ ಬಗೆದ ವಂಚನೆ ಎಂದು ಹೈಕೋರ್ಟ್ ಅಸಮಾಧಾನ ಹೊರಹಾಕಿದೆ. ಕಾರಣಕರ್ತರ ವಿರುದ್ಧ ಸಿಬಿಐ ತನಿಕೆಗೆ ಇದೀಗ ಹೈಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಡಿಕೆ ಸಿಂಗ್ ಹಾಗೂ ತಾರಾ ವಿತಸ್ತ ಗಂಜು ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಬೆಂಗಳೂರಿನ ಹೆಬ್ಬಾಳ ಅಮಾನಿಕೆರೆಯ ಬಹುಕೋಟಿ ಮೌಲ್ಯದ ಜಮೀನು ಇದಾಗಿದ್ದು, 2004ರಲ್ಲಿ ಪ್ರತಿ ಎಕರೆಗೆ 15 ಲಕ್ಷ ರೂಪಾಯಿಯಂತೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ರೈತರಿಂದ ಸ್ವಾಧೀನ ಪಡಿಸಿಕೊಂಡು ರಿಯಲ್ ಎಸ್ಟೇಟ್ ಗೆ ಹಂಚಿಕೆ ಮಾಡಲಾಗಿತ್ತು. 2000 ದಲ್ಲಿ ಹೈ ಲೆವೆಲ್ ಕಮಿಟಿ ಭೂಸ್ವಾಧಿನಕ್ಕೆ ಶಿಫಾರಸು ಮಾಡಿತ್ತು. ಅರ್ಜಿ ಸಲ್ಲಿಸಿದ ಐದು ದಿನದಲ್ಲಿ ಸಂಸ್ಥೆ ಸಭೆ ಸಭೆ ನಡೆಸಿ ಶಿಫಾರಸು ಮಾಡಿತು. 2001ರ ಒಳಗೆ 150 ಕೋಟಿ ಹೂಡಿಕೆ ಮಾಡುವುದಾಗಿ ಪ್ರಸ್ತಾವನೆ ಸಲ್ಲಿಸಿತ್ತು.
ಲೇಕ್ ವ್ಯೂ ಟೂರಿಸಮ್ ಕಾರ್ಪೊರೇಷನ್ ಸಂಸ್ಥೆ ಪರವಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಡಾ. ರಾಮದಾಸ್ ಪೈ, ಸೈಯದ್ ಮೊಹಮ್ಮದ್ ಸಲಾಹುದ್ದೀನ್, ದಯಾನಂದ ಪೈ ಹಾಗು ಸತೀಶ್ ಪೈ ಜಂಟಿ ಪ್ರವರ್ತಕರು ಎಂದು ಸಂಸ್ಥೆ ಹೇಳಿಕೊಂಡಿತು. 2000ನೇ ಇಸವಿಯಲ್ಲಿ ಸಂಸ್ಥೆ ಜಮೀನಿಗಾಗಿ ಅರ್ಜಿ ಸಲ್ಲಿಸಿತ್ತು. ಜಮೀನಿಗಾಗಿ ಅರ್ಜಿ ಸಲ್ಲಿಸಿದ ಸಂಸ್ಥೆ ನೊಂದಣಿಯಾಗಿದ್ದು 2011ರಲ್ಲಿ. ನೋಂದಣಿ ಆದಾಗ ಪ್ರವರ್ತಕರಾಗಿದ್ದು ಸುಶೀಲ್ ಮಂತ್ರಿ, ಸ್ನೇಹಲ್ ಮಂತ್ರಿ. ಕೇವಲ 1 ಲಕ್ಷ ಷೇರ್ ಕ್ಯಾಪಿಟಲ್ ಹೊಂದಿರುವ ಸಂಸ್ಥೆಯಾಗಿ ನೋಂದಣಿ ಆಗಿತ್ತು .
2022 ಮತ್ತು 23ರಲ್ಲಿ ಸಂಸ್ಥೆಯ ಮೌಲ್ಯ ಮೈನಸ್ 8 ಲಕ್ಷ 60 ಸಾವಿರ ಇದ್ದು ಇಂತಹ ಸಂಸ್ಥೆಗೆ ಭೂಮಿ ನೀಡಲು 2023ರಲ್ಲಿ ಸರ್ಕಾರ ನಿರ್ಧರಿಸಿತ್ತು. ಟೂರಿಸಂ ಸೆಂಟರ್ ಬದಲು ಕಮರ್ಷಿಯಲ್ ಟೌನ್ಶಿಪ್ ಗಾಗಿ ಹಂಚಿಕೆಗೆ ನಿರ್ಧರಿಸಿತ್ತು. ಸರ್ಕಾರದಿಂದಾದ ಭೂ ಸ್ವಾದಿನವೇ ಸಾರ್ವಜನಿಕ ಉದ್ದೇಶವಾಗಿರಲಿಲ್ಲ. ಸರ್ಕಾರದವರು ಖಾಸಗಿ ಅವರೊಂದಿಗೆ ಒಳಸಂಚು ನಡೆಸಿದ್ದಾರೆ. ರಾಜ್ಯದಲ್ಲಿನ ತನಿಖಾ ತಂಡದಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲ ಹೀಗಾಗಿ ಹಗರಣವನ್ನು ಸಿಬಿಐ ತನಿಖೆಗೆ ಬಯಸಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಇದೇ ವೇಳೆ ಟೂರಿಸಂ ಕಾರ್ಪೊರೇಷನ್ ಗೆ 10 ಲಕ್ಷ ತಂಡ ವಿಧಿಸಿ ಆದೇಶ ಹೊರಡಿಸಿದೆ ಭೂಸ್ವಾಧೀನ ರದ್ದು ಪಡಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿತು.








