ಯಾದಗಿರಿ : ರೈತರೊಬ್ಬರ ಬಳಿ ಸಬ್ಸಿಡಿ ಹಣದಲ್ಲಿ 5 ಸಾವಿರ ರೂ. ಫೋನ್ ಪೇ ಮೂಲಕ ಲಂಚ ಪಡೆದ ಹಿನ್ನೆಲೆಯಲ್ಲಿ ಯಾದಗಿರಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವದತ್ತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬದ್ದೆಪಲ್ಲಿ ಗ್ರಾಮದ ರೈತ ಶಂಕರಪ್ಪ ಈರುಳ್ಳಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದರು.ಅವರಿಗೆ ಸರಕಾರ 80 ಸಾವಿರ ರೂ. ಸಬ್ಸಿಡಿ ಹಣ ಮಂಜೂರು ಮಾಡಿತ್ತು. ಸಬ್ಸಿಡಿ ಹಣದಲ್ಲಿ ಸುಮಾರು 20 ಸಾವಿರ ರೂ. ನೀಡುವಂತೆ ಶಿವದತ್ತ ಬೇಡಿಕೆ ಇಟ್ಟಿದ್ದ. ಗುರುವಾರ ರೈತ ಶಂಕರಪ್ಪನಿಗೆ ಲಂಚದ ಹಣ ವರ್ಗಾವಣೆ ಮಾಡಲು ಫೋನ್ ಪೇ ನಂಬರ್ ನೀಡಿದ್ದ. 5 ಸಾವಿರ ರೂ. ಹಣವನ್ನು ಫೋನ್ ಪೇ ಮೂಲಕ ಜಮೆ ಮಾಡಿದ ರೈತ ಬಳಿಕ ಲೋಕಾಯುಕ್ತರಿಗೆ ದೂರು ನೀಡಿದ್ದಾನೆ.
ಇದರಿಂದಾಗಿ ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ್, ಡಿವೈಎಸ್ಪಿ ಜೆ.ಎಚ್.ಇನಾಂದಾರ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಸಿದ್ದರಾಯ, ಸಂಗಮೇಶ ಅವರ ನೇತೃತ್ವದ ತಂಡ ಯಾದಗಿರಿಯ ಅಂಬೇಡ್ಕರ್ ನಗರದಲ್ಲಿರುವ ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.