ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಹಾಗೂ ಕುಂದು ಕೊರತೆಗಳನ್ನು ನಿವಾರಿಸಿ ಎಂದು ನಿನ್ನೆ ಆಶಾಕಾರ್ಯಕರ್ತರು ಬೆಂಗಳೂರಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಖಾತ್ರಿಯಾಗಿ ಪಾವತಿಯಾಗುತ್ತಿದ್ದ ರೂ. 5,000 ಸಾವಿರದ ಬದಲು ರೂ.7,000 ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಸ್ಥಳಕ್ಕೆ ತೆರಳಿದ ದಿನೇಶ್ ಗುಂಡೂರಾವ್ ಅಲ್ಲಿ ಹಲವಾರು ಅಹವಾಲುಗಳನ್ನು ಸ್ವೀಕರಿಸಿ ನಮ್ಮ ಸರ್ಕಾರ ಯಾವತ್ತಿಗೂ ನಿಮ್ಮ ಪರವಾಗಿದೆ. ಆಶಾ ಕಾರ್ಯಕರ್ತೆಯರ ಕುಂದುಕೊರತೆಗಳ ನಿವಾರಣೆಯ ನಿಟ್ಟಿನಲ್ಲಿ ಸರ್ಕಾರ ಮತ್ತು ಇಲಾಖೆಯು ಮುಕ್ತ ಮನಸ್ಸಿನಲ್ಲಿದ್ದು, ತ್ವರಿತ ಪ್ರತಿಸ್ಪಂದನೆಗೆ ಸದಾ ಸಿದ್ಧವಾಗಿದೆ ದಯವಿಟ್ಟು ಪ್ರತಿಭಟನೆಯನ್ನು ಕೈಬಿಡಿ ಎಂದು ಮನವಿ ಮಾಡಿದರು.
ಆಶಾ ಕಾರ್ಯಕರ್ತರಿಗೆ ಮಾಸಿಕವಾಗಿ ರಾಜ್ಯ ಸರ್ಕಾರ ನೀಡುವ ರೂ. 5,000 ಜೊತೆಗೆ ರೂ.2,000 ಸೇರಿಸಿ ಒಟ್ಟು ರೂ.7,000 ಖಾತ್ರಿಪಡಿಸುವುದಾಗಿ ಘೋಷಿಸಿದರು. ಉಳಿದಂತೆ ಆಶಾ ಕಾರ್ಯಕರ್ತೆಯರು ನಡೆಸುವ ಆರೋಗ್ಯ ಸೇವೆ ಚಟುವಟಿಕೆಗಳನ್ನ ಪರಗಣಿಸಿ ಪ್ರೋತ್ಸಾಹಧನವನ್ನ ಪಾರದರ್ಶಕವಾಗಿ ನೀಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಒಂದು ವೇಳೆ ಯಾರಿಗೆ ತಮ್ಮ ಚಟುವಟಿಕೆಗಳ ಪ್ರಕಾರ ಪ್ರೋತ್ಸಾಹಧನ ದೊರೆಯುವುದಿಲ್ಲ ಅದನ್ನ 6 ತಿಂಗಳ ಕಾಲಮಿತಿಯೊಳಗೆ ಪರಿಹರಿಸಬೇಕು. ಕಾಲಮಿತಿಯೊಳಗೆ ಪರಿಹಾರವಾಗದಿದ್ದರೆ ಕಾರ್ಯಕರ್ತೆಯರಿಗೆ ನೇರವಾಗಿ ಸಿಗಬೇಕಾದ ಪ್ರೋತ್ಸಶಹಧನ ವರ್ಗಾವಣೆಯಾಗುವಂತೆ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಸರ್ಕಾರದಿಂದ ಈಗಾಗಲೇ ಗೃಹಲಕ್ಷ್ಮೀ ಯೋಜನೆಯಡಿ ನೀಡುವ ರೂ. 2,000 ಆಶಾ ಕಾರ್ಯಕರ್ತೆಯರಿಗೂ ಅನ್ವಯ ಆಗುವಂತೆ ಕ್ರಮ ಕೈಗೊಳ್ಳಲಾಗಿದೆ. 5 ಲಕ್ಷ ಆರೋಗ್ಯ ವಿಮೆಯನ್ನು ಆಶಾ ವರ್ಕರ್ಸ್ ಗೆ ಕಲ್ಪಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರ ಪರವಾಗಿದ್ದಾಗ ಪ್ರತಿಭಟನೆ ನಡೆಸುವ ಅಗತ್ಯತೆ ಇಲ್ಲ ಎಂದು ಆಶಾ ಕಾರ್ಯಕರ್ತೆಯರಿಗೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.