ನಾಗಾಂವ್ : ಅಸ್ಸಾಂನ ನಾಗಾಂವ್ʼನಲ್ಲಿ ಶಿವನ ಪಾತ್ರ ಮಾಡಿದ್ದ ಕಲಾವಿದನನ್ನ ಪೊಲೀಸರು ಬಂಧಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಬಂಧಿತ ಕಲಾವಿದ ಯಾವುದೋ ಸಾಮಾಜಿಕ ವಿಚಾರದಲ್ಲಿ ಶಿವನ ವೇಷ ಧರಿಸಿ ನಡುರಸ್ತೆಯಲ್ಲಿ ಬೀದಿ ನಾಟಕ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ, ದೇವರನ್ನು ತಪ್ಪಾಗಿ ನಿರೂಪಿಸಿದ್ದಕ್ಕಾಗಿ ಆತನನ್ನ ಬಂಧಿಸಲಾಗಿದೆ.
ಮಾಹಿತಿ ಪ್ರಕಾರ, ಪೊಲೀಸರು ಶಿವನ ಪಾತ್ರದಲ್ಲಿ ನಟಿಸಿರುವ ಆರೋಪಿಯನ್ನ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಇನ್ನು ಭಗವಾನ್ ಶಂಕರನ ಪಾತ್ರ ನಿರ್ವಹಿಸಿದ ವ್ಯಕ್ತಿಯನ್ನ ಬಂಧಿಸಲಾಗಿದೆ ಎಂದು ಸದರ್ ಪೊಲೀಸ್ ಠಾಣೆ ಪ್ರಭಾರಿ ಮನೋಜ್ ರಾಜವಂಶಿ ತಿಳಿಸಿದ್ದಾರೆ. ಸದ್ಯದಲ್ಲೇ ಆತನನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇನ್ನು ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡಿದ ಇನ್ನಿಬ್ಬರು ಆರೋಪಿಗಳನ್ನ ಶೀಘ್ರ ಬಂಧಿಸಲಾಗುವುದು ಎಂದು ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿದರು
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಇತರೆ ಆಹಾರ ಪದಾರ್ಥಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ್ದಾರೆ. ಅದ್ರಂತೆ, ಶನಿವಾರ ನಾಗಾಂವ್ ನಗರದ ಕಾಲೇಜು ಚೌಕ್ ಬಳಿ ಯುವಕ-ಯುವತಿಯೊಬ್ಬರು ಶಿವ ಹಾಗೂ ಮಾತಾ ಪಾರ್ವತಿಯ ವೇಷ ಧರಿಸಿ ಬೈಕ್ನಲ್ಲಿ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದ್ದಕ್ಕಿದ್ದಂತೆ ಬೈಕ್ನ ಆಯಿಲ್ ಖಾಲಿಯಾದಾಗ ಶಿವ-ಪಾರ್ವತಿ ನಡುವೆ ಮಾತಿನ ಚಕಮಕಿ ನಡೆದಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯೇ ವಾಗ್ವಾದಕ್ಕೆ ಪ್ರಮುಖ ಕಾರಣವಾಗಿದ್ದು, ಇದಲ್ಲದೇ ಔಷಧ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಕುರಿತು ಶಿವ-ಪಾರ್ವತಿ ರಸ್ತೆಯಲ್ಲಿ ಚರ್ಚೆ ನಡೆದಿದೆ. ಇಬ್ಬರೂ ಕಲಾವಿದರ ವಾದ-ವಿವಾದವನ್ನ ಆಲಿಸಲು ಜನಸಾಗರವೇ ನೆರೆದಿತ್ತು.
ಶಿವನ ಪಾತ್ರಧಾರಿ ಕಲಾವಿದರು ಪ್ರಧಾನಿ ನರೇಂದ್ರ ಮೋದಿ ಗುರಿಯಾಗಿಸಿ, ಬಿಜೆಪಿ ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಯಿಂದ ಕೆಲಸ ಮಾಡುತ್ತಿದೆ, ಈ ಸರ್ಕಾರಕ್ಕೆ ಸಾಮಾನ್ಯ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಹೇಳಿದರು. ಬೆಲೆ ಏರಿಕೆ ವಿರುದ್ಧ ರಸ್ತೆಗಿಳಿಯುವಂತೆ ಕಲಾವಿದರಿಗೆ ಕರೆ ನೀಡಿದರು. ಇಲ್ಲಿ ಬೀದಿನಾಟಕಗಳನ್ನು ಪ್ರದರ್ಶಿಸಿದ ನಂತ್ರ ಇಬ್ಬರೂ ನಟರು ಬಡಾ ಬಜಾರ್ ತಲುಪಿದರು ಮತ್ತು ಅಲ್ಲಿ ಅದೇ ರೀತಿಯ ಬೀದಿ ನಾಟಕಗಳನ್ನು ಪ್ರದರ್ಶಿಸಿದರು.
ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ʼನಿಂದ ಪ್ರಕರಣ ದಾಖಲು
ಶಿವನ ವೇಷ ಧರಿಸಿರುವ ಕಲಾವಿದನ ಹೆಸರನ್ನ ವಿರಿಂಚಿ ಬೋರಾ ಎಂದೂ, ಪಾರ್ವತಿ ಪಾತ್ರ ನಿರ್ವಹಿಸುತ್ತಿರುವ ಹುಡುಗಿಗೆ ಕರಿಷ್ಮಾ ಎಂದೂ ಹೇಳಲಾಗುತ್ತಿದೆ. ಇಬ್ಬರ ನಟನೆ ನಗರದಲ್ಲಿ ಕೆಲಕಾಲ ಚರ್ಚೆಗೆ ಗ್ರಾಸವಾಗಿತ್ತು. ಇದೇ ವೇಳೆ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ʼನ ನಾಗಾಂವ್ ಜಿಲ್ಲಾ ಸಮಿತಿಯೂ ಶಿವನ ಪಾತ್ರಧಾರಿ ಯುವಕನ ವಿರುದ್ಧ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ ಎಂದು ಆರೋಪಿಸಿದೆ.
ಅದ್ರಂತೆ, ಈ ಘಟನೆಗೆ ಸಂಬಂಧಿಸಿದಂತೆ ವಿರಿಂಚಿ ಬೋರಾ ವಿರುದ್ಧ ನಾಗಾವ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಾದ ಬಳಿಕ ನಾಗಾಂವ್ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ವಿರಿಂಚಿಯನ್ನ ಆತನ ಮನೆಯಿಂದ ಬಂಧಿಸಿದ್ದಾರೆ. ಆರೋಪಿ ಕಲಾವಿದನನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆದಿದೆ.