ನವದೆಹಲಿ : ರಾಷ್ಟ್ರೀಯ ಲಾಂಛನದ ವಿವಾದದ ನಡುವೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದು, ಸಾರನಾಥದಲ್ಲಿ ರಾಷ್ಟ್ರೀಯ ಲಾಂಛನ ಮತ್ತು ಹೊಸ ಸಂಸತ್ತಿನ ಮೇಲೆ ಒಂದೇ ರೀತಿ ಇದೆ, ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.
ಅಂದ್ಹಾಗೆ, ಪ್ರತಿಪಕ್ಷ ನಾಯಕರು ಮತ್ತು ಕಾರ್ಯಕರ್ತರು ಸರ್ಕಾರವು “ಆಕರ್ಷಕ ಮತ್ತು ಆತ್ಮವಿಶ್ವಾಸದ” ಅಶೋಕನ ಸಿಂಹಗಳನ್ನು ಬೆದರಿಸುವ ಮತ್ತು ಆಕ್ರಮಣಕಾರಿ ಭಂಗಿಯನ್ನ ಹೊಂದಿರುವ ಸಿಂಹಗಳೊಂದಿಗೆ ಬದಲಾಯಿಸುವ ಮೂಲಕ ರಾಷ್ಟ್ರೀಯ ಲಾಂಛನವನ್ನ ವಿರೂಪಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ ಮತ್ತು ತಕ್ಷಣವೇ ಬದಲಾವಣೆಯನ್ನು ಕೋರಿದ್ದಾರೆ.
ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಹೊಸ ಸಂಸತ್ ಕಟ್ಟಡವನ್ನ ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುವ ಪುರಿ, ಎರಡು ರಚನೆಗಳನ್ನು ಹೋಲಿಸುವಾಗ ಕೋನ, ಎತ್ತರ ಮತ್ತು ಪ್ರಮಾಣದ ಪರಿಣಾಮವನ್ನು ಶ್ಲಾಘಿಸಬೇಕು ಎಂದು ಹೇಳಿದರು.
“ಹೊಸ ಕಟ್ಟಡದ ಮೇಲೆ ಮೂಲ ಪ್ರತಿಕೃತಿಯನ್ನು ಇರಿಸಿದರೆ, ಅದು ಪೆರಿಫೆರಲ್ ಹಳಿಯ ಆಚೆಗೆ ಕಾಣಿಸುವುದಿಲ್ಲ. ಹೊಸ ಲಾಂಛನವು ನೆಲದಿಂದ 33 ಮೀಟರ್ ಎತ್ತರದಲ್ಲಿದೆ ಮತ್ತು ಸಾರನಾಥದಲ್ಲಿ ಇರಿಸಲಾದ ಮೂಲವು ನೆಲಮಟ್ಟದಲ್ಲಿದೆ ಎಂದು ‘ತಜ್ಞರು’ ತಿಳಿದುಕೊಳ್ಳಬೇಕು” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನು “ಸಾರನಾಥ ಲಾಂಛನವನ್ನ ಅಳತೆ ಮಾಡಿದರೆ ಅಥವಾ ಹೊಸ ಸಂಸತ್ ಕಟ್ಟಡದ ಲಾಂಛನವನ್ನು ಆ ಗಾತ್ರಕ್ಕೆ ಇಳಿಸಿದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ” ಎಂದು ಪುರಿ ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಇನ್ನು ಇದರ ಜೊತೆಗೆ ಸಾರನಾಥ ಲಾಂಛನದ ಚಿತ್ರವನ್ನ ಸಹ ಸಚಿವರು ಟ್ವೀಟ್ ಮಾಡಿದ್ದಾರೆ.