ಕೊಪ್ಪಳ : 2022-23ನೇ ಸಾಲಿಗೆ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ದಿಗಾಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ದ್ವಿ-ಚಕ್ರ-ತ್ರಿ-ಚಕ್ರ ಸರಕು ಸಾಗಾಣಿಕೆ ವಾಹನ ಹಾಗೂ ಮೈಕ್ರೊ ಕ್ರೆಡಿಟ್ ಪ್ರೇರಣಾ ಯೋಜನೆ (ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಮಾತ್ರ)ಯಡಿ ಸೌಲಭ್ಯಕ್ಕಾಗಿ ಅರ್ಜಿದಾರರ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು ಹಾಗೂ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ರೂ. 1,50,000 ಮತ್ತು ನಗರ ಪ್ರದೇಶದಲ್ಲಿ ರೂ. 3,00,000 ಗಳ ಮಿತಿಯಲ್ಲಿರಬೇಕು. ಉದ್ಯಮು ಶೀಲತಾ ಅಭಿವೃದ್ದಿ ಯೋಜನೆಯಡಿ ಅರ್ಜಿದಾರರು ಕನಿಷ್ಟ 21 ವರ್ಷಗಳಿಂದ ಗರಿಷ್ಟ 50 ವರ್ಷದೊಳಗಿರಬೇಕು.
ಮೈಕ್ರೊ ಕ್ರೆಡಿಟ್ (ಪ್ರೇರಣಾ) ಯೋಜನೆಯಡಿ ಅರ್ಜಿದಾರರು ಕನಿಷ್ಟ 21 ವರ್ಷಗಳಿಂದ ಗರಿಷ್ಟ 60 ವರ್ಷದೊಳಗಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಬ್ಯ ಪಡೆದಿರಬಾರದು ಮತ್ತು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
ಉದ್ಯಮ ಶೀಲತಾ ಅಭಿವೃದ್ದಿ ಯೋಜುನೆಯಡಿ ದ್ವಿ ಚಕ್ರ ಅಥವಾ ತ್ರಿ ಚಕ್ರ ಸಾಗಾಣಿಕೆ ವಾಹನ ಉದ್ದೇಶಗಳಿಗೆ ಘಟಕ ವೆಚ್ಚದಲ್ಲಿ ರೂ. 50,000 ಗಳ ಸಹಾಯಧನ ಹಾಗೂ ಉಳಿದ ಮೊತ್ತ ಬ್ಯಾಂಕ ಸಾಲವನ್ನಾಗಿ ಅರ್ಜಿದಾರರು ಸೇವಾ ವ್ಯಾಪ್ತಿಯ ಬ್ಯಾಂಕುಗಳಿಂದ ಮಂಜೂರಾತಿ ಪಡೆಯುವ ಷರತ್ತಿಗೆ ಒಳಪಟ್ಟು ಸಹಾಯಧನವನ್ನು ಮಂಜೂರು ಮಾಡಲಾಗುತ್ತದೆ. ವಾಹನಗಳಿಗೆ ಸೌಲಭ್ಯ ಪಡೆಯಲು ಫಲಾಪೇಕ್ಷಿಗಳು ಡ್ರೈವಿಂಗ್ ಲೈಸನ್ಸ್ ಅನ್ನು ಹೊಂದಿರಬೇಕು.
ಮೈಕ್ರೊ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಕನಿಷ್ಟ 10 ಮಹಿಳೆಯರು ಸ್ವ-ಸಹಾಯ ಗುಂಪಿನಲ್ಲಿ ಸದಸ್ಯರಿರಬೇಕು. ಸಂಘದ ಸದಸ್ಯರು ಬಿ.ಪಿ.ಎಲ್.ಪಡಿತರ ಚೀಟಿ ಮತ್ತು ಆಧಾರ ಕಾರ್ಡ ಹೊಂದಿರಬೇಕು. ಸ್ವ-ಸಹಾಯ ಸಂಘಗಳು ಸಕ್ಷಮ ಪ್ರಧಿಕಾರಗಳಿಂದ ನೋಂದಣಿಯಾಗಿರಬೇಕು ಹಾಗೂ ಸಂಘದ ಹೆಸರಿನಲ್ಲಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಸಂಘದಲ್ಲಿ ಒಬ್ಬ ಸದಸ್ಯರಿಗೆ ರೂ. 25,000 ರಂತೆ (ರೂ. 15,000 ಸಹಾಯಧನ ಹಾಗೂ 10,000 ಸಾಲ) ಒಟ್ಟು ರೂ. 2,50,000 ನೀಡಲಾಗುವುದು.
ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ https:karnataka.gov.in ನಲ್ಲಿ ಅಥವಾ ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರದಲ್ಲಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.