ನವದೆಹಲಿ : ಅಗ್ನಿಪಥ್ ಯೋಜನೆಯ ಬಗ್ಗೆ ರಾಜಸ್ಥಾನದ ಕಂದಾಯ ಸಚಿವ ರಾಮ್ ಲಾಲ್ ಜಾಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಗ್ನಿಪಥ್ ಯೋಜನೆಯು ದೇಶವನ್ನ ‘ತರಬೇತಿ ಪಡೆದ ಭಯೋತ್ಪಾದನೆ’ಯತ್ತ ಕೊಂಡೊಯ್ಯುತ್ತದೆ ಎಂದಿದ್ದಾರೆ.
“ಸಂಸದರು ಮತ್ತು ಶಾಸಕರು ಒಂದು ವರ್ಷ ಹುದ್ದೆಯಲ್ಲಿ ಕೆಲಸ ಮಾಡಿದ ನಂತ್ರವೇ ಪಿಂಚಣಿ ಪಡೆಯಬಹುದಾದ್ರೆ, ಅಗ್ನಿವೀರರಿಗೆ ಪಿಂಚಣಿ ಏಕೆ ನೀಡಬಾರದು? ಅಗ್ನಿವೀರ್ ಯೋಜನೆಯಡಿ ಮೂರರಿಂದ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ ನಂತ್ರ ಯುವಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗುತ್ತಾರೆ. ಹಾಗಾಗಿ ಯುವಕರ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕು” ಎಂದು ಸಚಿವ ರಾಮ್ ಲಾಲ್ ಜಾಟ್ ಹೇಳಿದರು.
ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ಯುವಕರಿಗೆ ಕೇಂದ್ರವು ಜೂನ್ 14 ರಂದು ಹೊಸ ಅಲ್ಪಾವಧಿಯ ನೇಮಕಾತಿ ನೀತಿಯನ್ನ ಅನಾವರಣಗೊಳಿಸಿತು. ಅಗ್ನಿಪಥ್ ಎಂದು ಕರೆಯಲ್ಪಡುವ ಈ ಯೋಜನೆಯು 17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನ ನಾಲ್ಕು ವರ್ಷಗಳ ಅವಧಿಗೆ “ಅಗ್ನಿವೀರ್” ಗಳಾಗಿ ಮೂರು ಸೇವೆಗಳಲ್ಲಿ ಯಾವುದಾದರೂ ಒಂದಕ್ಕೆ ಸೇರಿಸಲು ಅನುವು ಮಾಡಿಕೊಡುತ್ತದೆ.
‘ಅಗ್ನಿವೀರ್’ ಭಾರತೀಯ ಸೇನೆಯಲ್ಲಿ ಒಂದು ವಿಶಿಷ್ಟ ಶ್ರೇಣಿಯನ್ನ ರೂಪಿಸುತ್ತದೆ, ಅದು ಅಸ್ತಿತ್ವದಲ್ಲಿರುವ ಇತರ ಯಾವುದೇ ಶ್ರೇಣಿಗಳಿಗಿಂತ ವಿಭಿನ್ನವಾಗಿರುತ್ತದೆ ಮತ್ತು ಅವರನ್ನ ಯಾವುದೇ ರೆಜಿಮೆಂಟ್ ಮತ್ತು ಘಟಕಕ್ಕೆ ನಿಯೋಜಿಸಬಹುದು ಎಂದು ಸೇನೆ ಹೇಳಿದೆ.