ಬೆಂಗಳೂರು : ಮದುವೆಯಾಗಿದ್ದರು ಸಹ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಅಲ್ಲದೇ, ಭರತನಾಟ್ಯ ಕಲಾವಿದೆಯಾಗಿರುವ ಪತ್ನಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ಇಂದು ನಿರಾಕರಿಸಿತು.
ಅರ್ಜಿದಾರ ಪತಿಯು ಪತ್ನಿಯ ಕೈಯನ್ನು ತಿರುಗಿಸಿ, ಗಾಯವಾಗುವಂತೆ ಮಾಡಿ ಆಸ್ಪತ್ರೆಗೆ ಸೇರುವಂತಾಗಿದೆ ಎಂಬ ಅಂಶ ವೈದ್ಯರ ವರದಿಯಿಂದ ಗೊತ್ತಾಗಿದೆ. ದೂರಿನಲ್ಲಿ ದಂಪತಿ ಮದುವೆಯಾದ ಒಂದ ವರ್ಷದಲ್ಲಿ ಏನೆಲ್ಲಾ ನಡೆದಿದೆ ಎಂಬ ಅಂಶಗಳನ್ನು ವಿವರಿಸಲಾಗಿದೆ. ಈ ಎಲ್ಲ ಪತ್ನಿಯ ಮೇಲೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದು ಗೊತ್ತಾಗಲಿದೆ. ಹೀಗಾಗಿ ಪ್ರಕರಣದ ಪೂರ್ಣ ಪ್ರಮಾಣದ ವಿಚಾರಣೆ ಅಗತ್ಯವಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸುತ್ತಿರುವುದಾಗಿ ಪೀಠ ಹೇಳಿದೆ.
ಇದೇ ವೇಳೆ, ಭರತನಾಟ್ಯ ಮುಂದುವರಿಸದಂತೆ ಸೂಚನೆ ನೀಡಿದ್ದ ಆರೋಪ ಎದುರಿಸುತ್ತಿದ್ದ ಅತ್ತೆ ಮತ್ತು ಮಾವನ ವಿರುದ್ದ ಪ್ರಕರಣ ರದ್ದುಪಡಿಸಿ ನ್ಯಾಯಪೀಠ ಆದೇಶಿಸಿದೆ. ತಮ್ಮ ವಿರುದ್ಧ ಪತ್ನಿ ದಾಖಲಿಸಿರುವ ಪ್ರಕರಣ ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿತು.