ಮಂಡ್ಯ : ಮಂಗಳೂರಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸುಹಾಸ್ ಶೆಟ್ಟಿ ಹಂತಕರು ಯಾರೇ ಇರಲಿ, ಶೀಘ್ರದಲ್ಲಿ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗುತ್ತೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಪಟ್ಟಂತೆ ನಿನ್ನೆಯೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರಿಗೆ ಮಂಗಳೂರಿಗೆ ಹೋಗಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಕೊಲೆ ಯಾರದ್ದೇ ಆಗಿರಲಿ, ಯಾವ ಕಾರಣಕ್ಕೆ ಆಗಿರಲಿ, ನಮಗೆ ಪ್ರತಿ ಜೀವವೂ ಮುಖ್ಯ. ಈ ಹೀನ ಕೃತ್ಯ ಎಸಗಿರುವ ಅಪರಾಧಿಗಳ ಹೆಡೆಮುರಿ ಕಟ್ಟುವುದು ನಿಶ್ಚಿತ ಎಂದು ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಯಾಕೆ ನಡೆದಿದೆ ಗೊತ್ತಿಲ್ಲ. ಹಂತಕರು ಯಾರೇ ಆಗಿದ್ದರೂ ಕೂಡಲೇ ಕ್ರಮ ಆಗಬೇಕು. ಯಾರೇ ಆದ್ರೂ ಮನಷ್ಯರ ಪ್ರಾಣ ಮುಖ್ಯ.ಮೃತ ವ್ಯಕ್ತಿ ರೌಡಿಶೀಟರ್ ಅಂತ ಹೇಳುತ್ತಿದ್ದಾರೆ. ಹಂತಕರು ಯಾರೇ ಆಗಿದ್ದರೂ ಕೂಡಲೇ ಕ್ರಮ ಆಗಬೇಕು. ಶೀಘ್ರ ಆರೋಪಿಗಳ ಪತ್ತೆಗೆ ಕ್ರಮವಹಿಸಬೇಕು. ಇಂತಹ ಘಟನೆಗಳಿಗಾಗಿಯೇ ಬಿಜೆಪಿಯವರು ಕಾಯುತ್ತಿದ್ದಾರೆ ಎಂದರು.
ಬಿಜೆಪಿಯವರು ಸದಾಕಾಲ ಸಾವಿನಲ್ಲಿ ರಾಜಕಾರಣ ಮಾಡುತ್ತಾರೆ. ಇಂದು ಅವರು ಮಂಗಳೂರಿಗೆ ಹೊರಟಿದ್ದಾರೆ, ಕಳೆದ ವಾರ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಕೃತ್ಯಕ್ಕೆ 26 ಜನರು ಸಾವಿಗೀಡಾದರು, ಅಲ್ಲಿಗೆ ಇವರು ಹೋಗಿದ್ರಾ?ಅದು ಕೂಡ ಭದ್ರತಾ ವೈಫಲ್ಯವಲ್ಲವಾ? ಎಂದು ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.