ಬೆಂಗಳೂರು : ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ಆರ್ಸಿಬಿ ತಂಡ ಇದೀಗ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟಿದ್ದು, ಮಧ್ಯಾಹ್ನ 1: 30 ಗಂಟೆ ಸುಮಾರಿಗೆ ಬೆಂಗಳೂರಿಗೆ ಆರ್ಸಿಬಿ ತಂಡ ಆಗಮಿಸಲಿದೆ. ಅಲ್ಲದೆ ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರಿಗೆ ವಿಕ್ಟರಿ ಪರೇಡ್ ನಡೆಸಲಿದೆ.
ಇನ್ನು ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಕರ್ನಾಟಕಕ್ಕೆ ಆರ್ಸಿಬಿ ಯುವಕರು ಹೆಮ್ಮೆ, ಗೌರವ ತಂದಿದ್ದಾರೆ. ನಾನು ಕೂಡ ನಿನ್ನೆ ನಡೆದಂತಹ ಫೈನಲ್ ಪಂದ್ಯವನ್ನು ನೋಡಿದ್ದೇನೆ. ಆರ್ಸಿಬಿ ತಂಡದ ಆಟಗಾರರು ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹಾಗಾಗಿ ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡುವ ಕುರಿತಂತೆ ಗೃಹ ಸಚಿವ ಜಿ ಪರಮೇಶ್ವರ್ ಹಾಗು ಪೊಲೀಸ್ ಕಮಿಷನರ್ ಜೊತೆಗೆ ಮಾತನಾಡುತ್ತೇನೆ. ಟ್ರಾಫಿಕ್ ಕಂಟ್ರೋಲ್ ಮಾಡೋದೆಲ್ಲ ಇರುತ್ತದೆ ಎಂದು ತಿಳಿಸಿದರು.