15 ವರ್ಷ ವಯೋಮಿತಿ ಮೀರಿದ ಎಲ್ಲಾ ವಾಹನಗಳ ನೋಂದಣಿ ನವೀಕರಣ ಮಾಡಿಕೊಳ್ಳುವಂತೆ ಕೊಪ್ಪಳ ಪಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಅವರು ತಿಳಿಸಿದ್ದಾರೆ.
ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ, ಯಲಬುರ್ಗಾ, ಗಂಗಾವತಿ, ಕುಷ್ಟಗಿ, ಕಾರಟಗಿ, ಕನಕಗಿರಿ, ಕುಕನೂರ ವ್ಯಾಪ್ತಿಯ ಎಲ್ಲಾ ವಾಹನ ಬಳಕೆದಾರರಿಗೆ ತಮ್ಮ ಬಳಕೆಯಲ್ಲಿರುವ ದ್ವಿ-ಚಕ್ರ ವಾಹನಗಳು, ಕಾರು, ಟ್ರ್ಯಾಕ್ಟರ್, ಮೊದಲಾದ ವಾಹನಗಳು 15 ವರ್ಷ ವಯೋಮಿತಿ ಮೀರಿದ್ದಲ್ಲಿ ತಕ್ಷಣವೇ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಅಂತಹ ವಾಹನಗಳ ನೋಂದಣಿ ನವೀಕರಣ ಮಾಡಿಕೊಳ್ಳಬೇಕು. ತಪ್ಪಿದ್ದಲ್ಲಿ ಅಂತಹ ವಾಹನಗಳ ಮಾಲೀಕರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಿ ವಾಹನದ ನೋಂದಣಿಯನ್ನು ಅಮಾನತ್ತು ಮಾಡಲಾಗುವುದು.
ಅದೇ ರೀತಿ ಅರ್ಹತಾ ಪತ್ರ ಇಲ್ಲದೇ ಸಂಚರಿಸುತ್ತಿರುವ ಸಾರಿಗೆ ವಾಹನಗಳಾದ ಲಾರಿ, ಬಸ್ಸು, ಆಟೋರೀಕ್ಷಾ, ಟ್ಯಾಕ್ಸಿ ಮತ್ತು ಶಾಲಾ ವಾಹನಗಳ ವಿರುದ್ಧವೂ ಪ್ರವರ್ತನ ಚಟುವಟಿಕೆ ನಡೆಸಿ ವಾಹನಗಳನ್ನು ವಶಪಡಿಸಿಕೊಂಡು ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








