ಮೈಸೂರು : ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಇದೀಗ ಕೇವಲ ಮಾವಿನ ಕಾಯಿ ಕುಯ್ಯುವ ವಿಚಾರಕ್ಕೆ ಶುರುವಾದ ಗಲಾಟೆ ಓರ್ವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಶಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಲ್ಲೇಶ್ ಎಂದು ತಿಳಿದುಬಂದಿದೆ. ಇನ್ನು ಮಲ್ಲೇಶ್ ನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಆರೋಪಿಯನ್ನು ಮಲ್ಲೇಶ್ ತಮ್ಮನ ಮಗ ಚೇತನ್ ಎಂದು ತಿಳಿದುಬಂದಿದೆ. ಶಂಕಹಳ್ಳಿಯಲ್ಲಿರುವ ಜಮೀನಿನಲ್ಲಿ ಮಲ್ಲೇಶ್ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಜಮೀನು ವಿಚಾರದಲ್ಲಿ ವಿವಾದ ಶುರುವಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಈ ವೇಳೆ ಮಲ್ಲೇಶ್ ಜಮೀನಿನಲ್ಲಿದ್ದ ಮಾವಿನ ಮರದಿಂದ ಕಾಯಿಗಳನ್ನ ಕೀಳಿಸುವಾಗ ಚೇತನ್ ಕಿರೀಕ್ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಚೇತನ್ ಜೊತೆ ಸರಿತಾ, ಪ್ರವೀಣ, ಪವನ್, ಮಂಜುಳ, ಕರಿಗೌಡ ಸಹ ಸೇರಿ ಗಲಾಟೆ ಮಾಡಿದ್ದಾರೆ. ಈ ವೇಳೆ ಚೇತನ್ ತನ್ನ ಬಳಿ ಇದ್ದ ಚಾಕುವಿನಿಂದ ಮಲ್ಲೇಶ್ ಗೆ ಇರಿದು ಪರಾರಿಯಾಗಿದ್ದಾನೆ.
ರಕ್ತಸ್ರಾವದಿಂದ ನರಳುತ್ತಿದ್ದ ಮಲ್ಲೇಶ್ ರನ್ನ ಆಸ್ಪತ್ರೆಗೆ ಸಾಗಿಸಿದ್ದು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮೃತ ಮಲ್ಲೇಶ್ ಪತ್ನಿ ನಾಗಮ್ಮ ಚೇತನ್ ಸೇರಿದಂತೆ 6 ಮಂದಿ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.