ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭವಾಗಲಿದೆ. ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ 4 ರೂ.ಗೆ ಏರಿಕೆ ಮಾಡಿ ಅನುಮೋದನೆ ನೀಡಲಾಗಿತ್ತು. ಅದರ ಬೆನ್ನಲ್ಲಿ ಮೊಸರು, ವಿದ್ಯುತ್ ದರ ಹೆಚ್ಚಳವಾಗಿದೆ. ಹಾಗಾಗಿ ಇಂದಿನಿಂದ ಹೋಟೆಲ್ ಗಳಲ್ಲೂ ಸಹ ಟೀ ಕಾಫಿ ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೌದು ಹಾಲು, ಮೊಸರಿನ ದರ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲಿ ಚಹ, ಕಾಫಿ ಸೇರಿದಂತೆ ಹಾಲಿನ ಖಾದ್ಯ, ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆಯಾಗಲಿದೆ. ಸದ್ಯ ನಗರದಲ್ಲಿ ಟೀ, ಕಾಫಿ ಬೆಲೆ 15- 20 ಇದೆ. ಇದನ್ನು ಎಷ್ಟರ ಪ್ರಮಾಣದಲ್ಲಿ ಏರಿಕೆ ಮಾಡಬಹುದು ಎಂಬ ಬಗ್ಗೆ ಬೆಂಗಳೂರು ಹೋಟೆಲ್ಗಳ ಸಂಘ, ಕರ್ನಾಟಕ ಹೋಟೆಲ್ಗಳ ಸಂಘಗಳು ಸಭೆ ಸೇರಿ ನಿರ್ಧರಿಸಲಿವೆ. ನಂದಿನಿ ಹಾಲಿನ ಬೆಲೆಯೂ ಲೀ.ಗೆ 4ರೂ. ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಕಾಫಿ-ಟೀ ದರದಲ್ಲಿ ಶೇ.10-15ರಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ಹೋಟೆಲ್ಗಳಿಗೆ ಇಕ್ಕಟ್ಟು: ಅಕ್ಕಿ, ಬೇಳೆ, ತರಕಾರಿ, ಎಣ್ಣೆ ಎಲ್ಲವೂ ಕಳೆದ ಒಂದು ವರ್ಷದಲ್ಲಿ ಶೇ.30 ರಷ್ಟು ಏರಿಕೆ ಕಂಡಿವೆ. ದುಬಾರಿ ಸಂಬಳ, ಕಾರ್ಮಿಕರ ಕೊರತೆ, ಸರ್ಕಾರದ ಪ್ರೋತ್ಸಾಹವಿಲ್ಲದೆ ಲಾಭ, ನಷ್ಟ ಸರಿದೂಗಿಸಿಕೊಂಡು ಹೋಗುವುದು ಹೋಟೆಲ್ ಉದ್ಯಮಕ್ಕೆ ಸವಾಲಾಗಿದೆ. 1, 2 ಏರಿಕೆಯನ್ನು ಹೇಗಾದರೂ ನಿಭಾಯಿಸಬಹುದು. ಆದರೆ 4ರಷ್ಟು ಏರಿಕೆ ಹೋಟೆಲ್ ಲಾಭಕ್ಕೆ ಕುತ್ತು ತಂದಿದ್ದು, ಅಸ್ತಿತ್ವ ಅಲುಗಾಡಿಸುವ ಪ್ರಕ್ರಿಯೆ ಎಂದು ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಹಾಲಿನಿಂದ ತಯ್ಯಾರಿಸುವ ಹಲವು ಖಾದ್ಯಗಳ ಬೆಲೆಯೂ ಸಹ ಏರಿಕೆಯಾಗಲಿದೆ.